ಅಮೃತ್ ಸರ: ಪಂಜಾಬ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ವೇಳೆ ಪ್ರಣಾಳಿಕೆಯನ್ನು ಸಿಖ್ ಧರ್ಮದ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್ ಗೆ ಹೋಲಿಕೆ ಮಾಡಿದ್ದ ಆಶಿಶ್ ಖೈತಾನ್ ತಪ್ಪಿಗೆ ಆಮ್ ಆದ್ಮಿ ಪಕ್ಷ ತೇಪೆ ಹಚ್ಚಲು ಯತ್ನಿಸುತ್ತಿದೆ.
ಆಮ್ ಆದ್ಮಿ ಪಕ್ಷದ ನಾಯಕ ಹರ್ವಿಂದರ್ ಸಿಂಗ್ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಲಿದ್ದು ಸಿಖ್ ಸಮುದಾಯದವರಲ್ಲಿ ಕ್ಷಮೆ ಯಾಚಿಸಲಿದ್ದಾರೆ. ಫೂಲ್ಕಾ ಅವರೊಂದಿಗೆ ಇತರ ಆಮ್ ಆದ್ಮಿ ಪಕ್ಷದ ನಾಯಕರು ಗೋಲ್ಡನ್ ಟೆಂಪಲ್ ನ ದರ್ಬಾರ್ ಸಾಹಿಬ್ ಗೆ ಭೇಟಿ ನೀಡಲಿದ್ದಾರೆ.
ಪ್ರಣಾಳಿಕೆಯನ್ನು ಗುರುಗ್ರಂಥ ಸಾಹಿಬ್ ಗೆ ಹೋಲಿಕೆ ಮಾಡಿದ್ದ ಆಶಿಶ್ ಖೈತಾನ್ ವಿರುದ್ಧ ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಪ್ರಕರಣ ದಾಖಲಾಗಿದೆ. ಪ್ರಣಾಳಿಕೆಯನ್ನು ಸಿಖ್ ಸಮುದಾಯದ ಪವಿತ್ರ ಗ್ರಂಥಕ್ಕೆ ಹೋಲಿಸಿ ಪ್ರಣಾಳಿಕೆ ಪುಸ್ತಕದ ಮುಖಪುಟದಲ್ಲಿ ಗೋಲ್ಡನ್ ಟೆಂಪಲ್ ನ ಚಿತ್ರ ಬಳಕೆ ಮಾಡಿದ್ದಕ್ಕಾಗಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಆಮ್ ಆದ್ಮಿ ಪಕ್ಷ ಕ್ಷಮೆ ಯಾಚಿಸಿತ್ತು. ಆದರೂ ಸಹ ಸಿಖ್ ಸಮುದಾಯದ ಆಕ್ರೋಶ ಕಡಿಮೆಯಾಗದ ಹಿನ್ನೆಲೆಯಲ್ಲಿ ಆಪ್ ನಾಯಕ ಹರ್ವಿಂದರ್ ಸಿಂಗ್ ನೇತೃತ್ವದ ತಂಡ ಗೋಲ್ಡನ್ ಟೆಂಪಲ್ ಗೆ ತೆರಳಿ ಸಿಖ್ ಸಮುದಾಯದವರ ಕ್ಷಮೆ ಯಾಚಿಸಲಿದೆ ಎಂದು ತಿಳಿದುಬಂದಿದೆ.