ರಾಮೇಶ್ವರಂ: ನಾಪತ್ತೆಯಾಗಿರುವ ವಾಯುಪಡೆಯ ಎಎನ್-32 ವಿಮಾನಕ್ಕಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ಬುಧವಾರ ಆರನೇ ದಿನಕ್ಕೆ ಕಾಲಿಟ್ಟಿದೆ.
ಈ ಮಧ್ಯೆ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಹಡಗುಗಳಿಗೆ ಬಂಗಾಳಕೊಲ್ಲಿಯಲ್ಲಿ ಕೆಲವು ವಸ್ತುಗಳು ಸಿಕ್ಕಿದ್ದು, ಅದು ಕಾಣೆಯಾದ ವಿಮಾನಕ್ಕೆ ಸೇರಿದ್ದೇ ಅಥವಾ ಇಲ್ಲ ಎಂಬುದರ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ ಎಂದು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಹೇಳಿದ್ದಾರೆ.
ಹಡಗಿನಿಂದ ವಸ್ತುಗಳು ಸಿಕ್ಕಿರುವ ಕುರಿತು ಮಾಹಿತಿ ಬಂದಿದೆ, ಆದರೆ ಅವು ಕಾಣೆಯಾದ ವಿಮಾನಕ್ಕೆ ಸೇರಿರುವುದೇ ಎಂಬುದು ಪರಿಶೀಲನೆ ನಡೆಸಿದ ಬಳಿಕ ತಿಳಿದು ಬರಲಿದೆ. ಹಾಗಾಗಿ ಆ ವಸ್ತುಗಳು ಕಾಣೆಯಾದ ವಿಮಾನದ್ದೇ ಎಂದು ನಾವು ಈಗಲೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದಿದ್ದಾರೆ.
ವಾಯುಪಡೆ, ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಗಳು ವಿಮಾನಕ್ಕಾಗಿ ಶೋಧ ಕಾರ್ಯ ಮುಂದುವರೆಸಿವೆ ಎಂದು ಪರಿಕ್ಕರ್ ತಿಳಿಸಿದ್ದಾರೆ.
ಜುಲೈ 22 ರಂದು ಕಾಣೆಯಾಗಿರುವ ವಿಮಾನಕ್ಕಾಗಿ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಯ 17 ಹಡಗುಗಳು ಮತ್ತು 23 ವಿಮಾನ ಮತ್ತು ಹೆಲಿಕಾಪ್ಟರ್ಗಳು ಶೋಧ ಕಾರ್ಯ ನಡೆಸುತ್ತಿವೆ.
ಮಾರಿಷಸ್ ಬಳಿ ಸಂಶೋಧನೆ ನಡೆಸುತ್ತಿರುವ ‘ಸಾಗರ ನಿಧಿ’ ಎಂಬ ಸಂಶೋಧನಾ ನೌಕೆಯನ್ನು ಶೋಧ ಕಾರ್ಯದಲ್ಲಿ ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದು ಪರಿಕ್ಕರ್ ಮಂಗಳವಾರ ತಿಳಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos