ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿದ ಎಎನ್-32 ಸಾಗಾಣಿಕೆ ವಿಮಾನ ಕಣ್ಮರೆಯಾಗಿದ್ದನ್ನು ಹುಡುಕಾಟ ನಡೆಸಲು ಅಮೆರಿಕ ಉಪಗ್ರಹದ ಸಹಾಯವನ್ನು ಭಾರತ ಕೇಳಿದ್ದು, ವಿಮಾನವನ್ನು ಸಂಚು ನಡೆಸಿ ನಾಶಗೊಳಿಸಿರುವ ಸಾಧ್ಯತೆಯನ್ನು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ತಳ್ಳಿಹಾಕಿದ್ದಾರೆ.
ಚೆನ್ನೈಯಿಂದ ಪೋರ್ಟ್ ಬ್ಲೇರ್ ಗೆ ಹೊರಟಿದ್ದ ಎಎನ್-32 ವಿಮಾನ ಬಂಗಾಳಕೊಲ್ಲಿ ಬಳಿ ಕಳೆದ ಶುಕ್ರವಾರ ಕಣ್ಮರೆಯಾಗಿತ್ತು. ಅದರಲ್ಲಿ 29 ಸಿಬ್ಬಂದಿಗಳಿದ್ದರು.
ಇನ್ನೂ ಸುಳಿವಿಲ್ಲ: ವಿಮಾನ ಹುಡುಕಾಟದ ಬೆಳವಣಿಗೆ ಬಗ್ಗೆ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ಪರ್ರಿಕರ್, ಇದುವರೆಗೆ ಭಾರತದ ಸ್ಯಾಟಲೈಟ್ ಒಂದು ಸಿಗ್ನಲ್ ನ್ನು ಕೂಡ ಪಡೆದಿಲ್ಲ. ಹಾಗಾಗಿ ಅಮೆರಿಕದ ರಕ್ಷಣಾ ಪಡೆಯನ್ನು ಸಂಪರ್ಕಿಸಿ ಅವರ ಸ್ಯಾಟಲೈಟ್ ಯಾವುದಾದರೂ ಸಿಗ್ನಲ್ ಪಡೆದಿದ್ದಾರೆಯೇ ಎಂದು ಅಧಿಕಾರಿಗಳು ಕೇಳುತ್ತಿದ್ದಾರೆ. ನಮ್ಮ ಸ್ಯಾಟಲೈಟ್ ಜೊತೆಗೆ ಹುಡುಕಾಟ ನಡೆಸಲು ಅಮೆರಿಕದ ಉಪಗ್ರಹಗಳ ಸಹಾಯವನ್ನು ಕೋರಲಾಗಿದೆ. ನಮ್ಮ ಪ್ರಯತ್ನ ಫಲಕೊಡಬಹುದು ಎಂಬ ನಿರೀಕ್ಷೆಯಿದೆ ಎಂದರು.
ವಿಮಾನ ಸಮರ್ಥವಾಗಿತ್ತು: ಕಾಣೆಯಾದ ವಿಮಾನ ಸಮರ್ಥವಾಗಿತ್ತು. ವಿಮಾನದ ಭಾಗಗಳು ಹಳೆಯದಾಗಿದ್ದರೆ ಹಾರಾಟಕ್ಕೆ ಬಿಡುವುದಿಲ್ಲ. ಮೊದಲ ಕೂಲಂಕಷ ಪರಿಶೀಲನೆ ನಂತರ ವಿಮಾನ 279 ಗಂಟೆಗಳ ಹಾರಾಟ ನಡೆಸಿತ್ತು ಎಂದು ಹೇಳಿದರು.