ಗಯಾ: ಕಾರು ಓವರ್ಟೇಕ್ ಮಾಡಿದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಜೆಡಿಯು ಎಂಎಲ್ ಸಿ ಮನೋರಮಾ ದೇವಿ ಪುತ್ರ ರಾಕೇಶ್ ರಂಜನ್ ಯಾದವ್ ಅಲಿಯಾಸ್ ರಾಕಿ ಯಾದವ್ ವಿರುದ್ಧ ಸೋಮವಾರ ಗಯಾ ಪೊಲೀಸರು ಸ್ಥಳೀಯ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಕಾರು ಓವರ್ಟೇಕ್ ಮಾಡಿದ ಅದಿತ್ಯ ಸಚ್ ದೇವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕಿ ಸಹೋದರ ಟೆನಿ ಯಾದವ್, ಆತನ ತಂದೆ ಬಿಂದಿ ಯಾದವ್ ಹಾಗೂ ತನ್ನ ರಾಕಿ ಯಾದವ್ ತಾಯಿಯ ಅಂಗರಕ್ಷಕ ರಾಜೇಶ್ ಕುಮಾರ್ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದಾರೆ.
ರಾಕಿ ಯಾದವ್, ಟೆನಿ ಯಾದವ್ ಹಾಗೂ ರಾಜೇಶ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು 120ಬಿ ಅಡಿ ಕೇಸ್ ದಾಖಲಿಸಲಾಗಿದೆ. ಇನ್ನು ಆರೋಪಿಗಳು ತಪ್ಪಿಸಲು ಸಹಕರಿಸಿದ ಆರೋಪದ ಮೇಲೆ ಬಿಂದಿ ಯಾದವ್ ವಿರುದ್ಧ ಕೇಸ್ ದಾಖಲಿಸಲಾಗಿದೆ.
ತನಿಖಾ ಅಧಿಕಾರಿ ರಾಂಪುರ ಠಾಣಾಧಿಕಾರಿ ಗೌರಿ ಶಂಕರ್ ಗುಪ್ತಾ ಅವರು ಪ್ರಕರಣ ನಡೆದ ಒಂದು ತಿಂಗಳಲ್ಲೇ ನಾಲ್ಕನೆ ಎಸಿಜೆಎಂ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ವ್ಯಾಪಾರಿಯೊಬ್ಬರ ಪುತ್ರ ಆದಿತ್ಯ ಸಚ್ದೇವ್ ಹಾಗೂ ಸ್ನೆಹಿತರನ್ನು ಒಳಗೊಂಡ ಸ್ವಿಪ್ಟ್ ಕಾರು ಶಾಸಕಿಯ ಪುತ್ರ ರಾಕಿಯ ಎಸ್ಯುವಿ ಕಾರನ್ನು ಓವರ್ ಟೇಕ್ ಮಾಡಿದ ಹಿನ್ನೆಲೆಯಲ್ಲಿ ಉಭಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಆವೇಶಕ್ಕೆ ಒಳಗಾದ ರಾಕಿ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಆದಿತ್ಯಾಗೆ ಗುಂಡಿಟ್ಟು ಹತ್ಯೆ ಮಾಡಿದ್ದರು.