ದೇಶ

ನೀಲಿ ಜಿಂಕೆ, ಕೋತಿ, ಕಾಡು ಹಂದಿ ಹತ್ಯೆಗೆ ತಡೆ ನೀಡಲು "ಸುಪ್ರೀಂ" ನಕಾರ

Srinivasamurthy VN

ನವದೆಹಲಿ: ಬಿಹಾರ ರೈತರ ಬೆಳೆ ನಾಶ ಮಾಡುತ್ತಿದ್ದ ನೀಲ್ಗೈ (ನೀಲಿ ಜಿಂಕೆ), ಹಿಮಾಚಲ ಪ್ರದೇಶದ ಕೆನ್ನೆ ಚೀಲ, ಉದ್ದ ಬಾಲದ ಕೋತಿ ಮತ್ತು ಉತ್ತರಾಖಂಡದ ಕಾಡುಹಂದಿಗಳ ಸಾಮೂಹಿಕ  ಹತ್ಯೆಗೆ ತಡೆ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಈ ಹಿಂದೆ ಬಿಹಾರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳ ರೈತರ ಪಾಲಿಗೆ ದುಃಸ್ವಪ್ನವಾಗಿದ್ದ ನೀಲಿ ಜಿಂಕೆ, ಕೋತಿ, ಕಾಡು ಹಂದಿ ಸಾಮೂಹಿಕ ಹತ್ಯೆಗೆ ಕೇಂದ್ರ ಸರ್ಕಾರ ಅನುಮತಿ  ನೀಡಿತ್ತು. ಆದರೆ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಪ್ರಾಣಿಗಳ ಹಕ್ಕುಗಳ ಹೋರಾಟಗಾರರಾದ ಗೌರಿ ಮೌಲೇಖಿ ಎಂಬುವವರು ಅರ್ಜಿ ಸಲ್ಲಿಸಿದ್ದರು. ಅಲ್ಲದೆ ತಮ್ಮ ಅರ್ಜಿಯಲ್ಲಿ ಬೆಳೆ ನಾಶದ  ಹಿಂದಿನ ಸತ್ಯಾಂಶ ಅರಿಯದೇ ಪ್ರಾಣಿಗಳ ಸಾಮೂಹಿಕ ಹತ್ಯೆಗೈಯ್ಯುವುದು ಸರಿಯಲ್ಲ ಎಂದು ಅವರು ಹೇಳಿದ್ದು, ಈ ಬಗ್ಗೆ ವೈಜ್ಞಾನಿಕ ತನಿಖೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಇಂದು ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಆದರ್ಶಕುಮಾರ್ ಗೋಯೆಲ್ ಮತ್ತು ಎಲ್. ನಾಗೇಶ್ವರರಾವ್ ಅವರನ್ನೊಳಗೊಂಡ ರಜಾಕಾಲೀನ ಪೀಠ ಗೌರಿ  ಮೌಲೇಖಿ ಅವರ ಅರ್ಜಿಯನ್ನು ತಿರಸ್ಕರಿಸಿ ಪ್ರಾಣಿಗಳ ಸಾಮೂಹಿಕ ಹತ್ಯೆಗೆ ತಡೆ ನೀಡಲು ನಿರಾಕರಿಸಿದೆ. ಅಂತೆಯೇ ಪ್ರಾಣಿಗಳ ಸಾಮೂಹಿಕ ಹತ್ಯೆಗೆ ಕೈಗೊಂಡ ನಿರ್ಧಾರದ ಬಗೆಗೆ ವಿವರ  ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ 2 ವಾರಗಳ ಗಡವು ನೀಡಿದೆ.

SCROLL FOR NEXT