ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಕಳೆದ ಫೆ.29ರಂದು ಮಂಡಿಸಿದ ತನ್ನ ಮೂರನೇ ಬಜೆಟ್ ನಲ್ಲಿ ಹಲವು ಯೋಜನೆಗಳಿಗಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರಿಗೆ ತಿಲಾಂಜಲಿ ಹೇಳಿ ಆ ಯೋಜನೆಗಳಿಗೆ ಮರುನಾಮಕರಣ ಮಾಡಲಾಗಿದೆ.
ಬಜೆಟ್ ನಲ್ಲಿ ಕನಿಷ್ಠ ನಾಲ್ಕು ಮುಖ್ಯ ಯೋಜನೆಗಳಿಗಿದ್ದ ರಾಜೀವ್ ಗಾಂಧಿ ಹೆಸರನ್ನು ಕೈಬಿಟ್ಟಿರುವ ನರೇಂದ್ರ ಮೋದಿ ಸರ್ಕಾರ, ಆ ಯೋಜನೆಗಳಿಗೆ ಬಿಜೆಪಿಯ ಯಾವುದೇ ಹಿರಿಯ ರಾಜಕೀಯ ನಾಯಕರ ಹೆಸರನ್ನು ಇಟ್ಟಿಲ್ಲ. ಬದಲಾಗಿ ಆ ಯೋಜನೆಗಳ ಹೆಸರುಗಳನ್ನು ರಾಜಕೀಯವಾಗಿ ಅಲಿಪ್ತಗೊಳಿಸಿರುವುದು ಗಮನಾರ್ಹವಾಗಿದೆ.
ಪಂಚಾಯತ್ ರಾಜ್ ಸಚಿವಾಲಯದ ವ್ಯಾಪ್ತಿಗೆ ಬರುವ, ಅಧಿಕಾರ ವಿಕೇಂದ್ರೀಕರಣದ, ರಾಜೀವ್ ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನ ಯೋಜನೆಯ ಹೆಸರು ಎಪ್ರಿಲ್ 1ರಿಂದ ಪಂಚಾಯತ್ ಸಶಕ್ತೀಕರಣ ಅಭಿಯಾನ ಎಂದಾಗಲಿದೆ.
ಇನ್ನು ರಾಜೀವ್ ಗಾಂಧಿ ನ್ಯಾಶನಲ್ ಫೆಲೋಶಿಪ್ ಫಾರ್ ಸ್ಟೂಡೆಂಟ್ಸ್ ವಿದ್ ಡಿಸೆಬಿಲಿಟೀಸ್ ಎಂಬ ಯೋಜನೆಯ ಹೆಸರು ಇನ್ನು ಮುಂದೆ "ನ್ಯಾಶನಲ್ ಫೆಲೋಶಿಪ್ ಫಾರ್ ಸ್ಟೂಡೆಂಟ್ಸ್ ವಿದ್ ಡಿಸೆಬಿಲಿಟೀಸ್' ಎಂದಾಗಲಿದೆ.
ರಾಜೀವ್ ಗಾಂಧಿ ನ್ಯಾಶನಲ್ ಫೆಲೋಶಿಪ್ ಫಾರ್ ಶೆಡ್ನೂಲ್ಡ್ ಕ್ಯಾಸ್ಟ್ಸ್ ಯೋಜನೆಯ ಹೆಸರು ಇನ್ನು ಮುಂದೆ "ನ್ಯಾಶನಲ್ ಫೆಲೋಶಿಪ್ ಫಾರ್ ಶೆಡ್ನೂಲ್ಡ್ ಕ್ಯಾಸ್ಟ್ಸ್' ಎಂದಾಗಲಿದೆ.
ರಾಜೀವ್ ಗಾಂಧಿ ಖೇಲ್ ಅಭಿಯಾನ್ ಯೋಜನೆಯು ಹಲವು ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಯೋಜನೆಯಾಗಿರುವುದರಿಂದ ಅದಕ್ಕೆ "ಖೇಲೋ ಇಂಡಿಯಾ' ಎಂಬ ಬೃಹತ್ ವ್ಯಾಪ್ತಿಯ, ಮುಂಚೂಣಿ ಯೋಜನೆಯ ಹೆಸರನ್ನು ಇಡಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos