ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ 60 ದಿನಗಳ ಗಡುವು ನೀಡಿದ್ದಾರೆ.
ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ದೂರುಗಳು ರಾಶಿ ರಾಶಿ ಬಿದ್ದಿದ್ದು, ಅವುಗಳನ್ನು ಆದಷ್ಟು ಇತ್ಯರ್ಥಪಡಿಸಲು ಪ್ರಧಾನಿ ಅಧಿಕಾರಿಗಳಿಗೆ ಡೆಡ್ ನೈಲ್ ನೀಡಿದ್ದಾರೆ. ಸಾಮಾನ್ಯ ರೀತಿಯ ದೂರುಗಳನ್ನು 30 ದಿನಗಳಲ್ಲಿ ಹಾಗೂ ವಿಶೇಷವಾದ ದೂರುಗಳನ್ನು 60 ದಿನಗಳ ಒಳಗೆ ಇತ್ಯರ್ಥಪಡಿಸಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಪ್ರಗತಿಪರ ಆಡಳಿತೆ ಮತ್ತು ಸಕಾಲಿಕ ಅನುಷ್ಠಾನಕ್ಕೆ ರೂಪಿಸಲಾಗಿರುವ ಮಲ್ಟಿ ಮೋಡಾಲ್ ವೇದಿಕೆಯಾಗಿರುವ ಐಸಿಟಿ ಆಧರಿತ "ಪ್ರಗತಿ' ಮೂಲಕ ಅಧಿಕಾರಿಗಳೊಂದಿಗೆ ನಡೆಸಲಾದ 11ನೇ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಆಧಾರ್ ನೊಂದಿಗೆ ಎಲ್ಲ ಭೂ ದಾಖಲೆಗಳನ್ನು ಏಕತ್ರಗೊಳಿಸಬೇಕು ಮತ್ತು ಪರಿಣಾಮಕಾರಿ ಆಡಳಿತಕ್ಕೆ ಅವಶ್ಯವಿರುವ ಮಾರ್ಗೋಪಾಯಗಳನ್ನು ಅನುಸರಿಸುವಂತೆ ಸೂಚಿಸಿದರು.
ಜನರ ದೂರುಗಳನ್ನು ನಿಭಾಯಿಸುವುದು, ವಿಲೇವಾರಿ ಮಾಡುವುದು ಮತ್ತು ಇತ್ಯರ್ಥ ಪಡಿಸುವುದು ಪ್ರಜಾಸತ್ತೆಯಲ್ಲಿ ಅತ್ಯಂತ ಮಹತ್ವದ ಕೆಲಸವಾಗಿದೆ. ಸರ್ಕಾರಿ ಅಧಿಕಾರಿಗಳು ಈ ನಿಟ್ಟಿನಲ್ಲಿ ತಮ್ಮ ಕಾರ್ಯ ಶೈಲಿಯನ್ನು ಇನ್ನಷ್ಟು ಚುರುಕುಗೊಳಿಸಬೇಕು ಎಂದು ಮೋದಿ ಹೇಳಿದರು.