ಹೈದರಾಬಾದ್: ಕೇರಳದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಸಂಘಟನೆಯ 15 ವಿದ್ಯಾರ್ಥಿಗಳನ್ನು ಬಂಧಿಸಿರುವುದನ್ನು ಹೈದರಾಬಾದ್ ವಿವಿಯ ಸಾಮಾಜಿಕ ನ್ಯಾಯದ ಜಂಟಿ ಕ್ರಿಯಾ ಸಮಿತಿ ವಿರೋಧಿಸಿದೆ.
ಹೈದರಾಬಾದ್ ವಿವಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದಾಳಿಯನ್ನುಖಂಡಿಸಿ ಹಾಗೂ ರೋಹಿತ್ ವೇಮುಲಾ ಗೆ ನ್ಯಾಯ ನೀಡಬೇಕೆಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಸಂಘಟನೆ(ಎಸ್ಐಒ)ಯ ವಿದ್ಯಾರ್ಥಿಗಳು ಕೇರಳದ ಕೋಯಿಕ್ಕೋಡ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಬಂಧಿಸಲಾಗಿರುವುದನ್ನು ಹೈದರಾಬಾದ್ ವಿವಿಯ ಜಂಟಿ ಕ್ರಿಯಾ ಸಮಿತಿ ಖಂಡಿಸಿದೆ.
ಎಸ್ಐಒ ವಿದ್ಯಾರ್ಥಿಗಳ ವಿರುದ್ಧ ಸುಳ್ಳು ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ ಎಂದಿರುವ ಜಂಟಿ ಕ್ರಿಯಾ ಸಮಿತಿ, ಮುಸ್ಲಿಂ ಯುವಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದೆ. ಬಂಧಿತ ವಿದ್ಯಾರ್ಥಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಹಾಗೂ ಅವರ ವಿರುದ್ಧ ದಾಖಲಿಸಲಾಗಿರುವ ಸುಳ್ಳು ಪ್ರಕರಣಗಳನ್ನು ರದ್ದುಗೊಳಿಸಬೇಕೆಂದು ಕ್ರಿಯಾ ಸಮಿತಿ ಒತ್ತಾಯಿಸಿದೆ.