ಪಠಾಣ್ ಕೋಟ್: ಪಠಾಣ್ ಕೋಟ್ ವಾಯು ನೆಲೆ ಮೇಲೆ ಉಗ್ರರ ದಾಳಿ ಪ್ರಕರಣದ ತನಿಖೆ ನಡೆಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನ ತನಿಖಾ ತಂಡಕ್ಕೆ ಪ್ರತಿಭಟನೆಯ ಬಿಸಿ ತಟ್ಟಿದೆ.
ಪಾಕಿಸ್ತಾನದ ಜಂಟಿ ತನಿಖಾ ತಂಡ ಪಠಾಣ್ ಕೋಟ್ ವಾಯು ನೆಲೆಯತ್ತ ಸಾಗುತ್ತಿದ್ದಂತೆಯೇ ಪಂಜಾಬ್ ನ ಪ್ರಧಾನ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ತನಿಖಾ ತಂಡದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಕಪ್ಪು ಬಾವುಟ ಪ್ರದರ್ಶಿಸಿ ಐಎಸ್ಐ ನ ಅಧಿಕಾರಿಗಳನ್ನೊಳಗೊಂಡ ತನಿಖಾ ತಂಡದ ವಿರುದ್ಧ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಪಾಕ್ ಅಧಿಕಾರಿಗಳ ಹೆಸರಿದ್ದ ಬ್ಯಾನರ್ ಗಳು ಕಂಡುಬಂದಿದೆ. ಪ್ರತಿಭಟನೆ ಬಗ್ಗೆ ಸುಳಿವಿದ್ದ ಹಿನ್ನೆಲೆಯಲ್ಲಿ ವಾಯುನೆಲೆ ಬಳಿ ಭದ್ರತಾ ಸಂಸ್ಥೆಗಳು ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿವೆ. ಭಾನುವಾರ ಭಾರತಕ್ಕೆ ಆಗಮಿಸಿರುವ ಪಾಕ್ ತನಿಖಾ ತಂಡ, ಎನ್ಐಎ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಂಗಳವಾರ(ಮಾ.29 ) ರ ಬೆಳಿಗ್ಗೆ ಪಠಾಣ್ ಕೋಟ್ ವಾಯುನೆಲೆಗೆ ಆಗಮಿಸಿದೆ.