ನವದೆಹಲಿ: ಸಿಗರೇಟು ತಯಾರಕರು ಪ್ಯಾಕೆಟ್ ಗಳ ಹೊರಗೆ ದೊಡ್ಡದಾದ ಅಕ್ಷರಗಳಲ್ಲಿ ಆರೋಗ್ಯ ಎಚ್ಚರಿಕೆ ಮುದ್ರಿಸುವಂತೆ ಹೊರಡಿಸಿರುವ ವಿವಾದಿತ ಕಾನೂನನ್ನು ಅನುಸರಿಸುವಂತೆ ಸುಪ್ರೀಂ ಕೋರ್ಟ್ ತಂಬಾಕು ಕಂಪೆನಿಗಳಿಗೆ ಬುಧವಾರ ಆದೇಶ ಮಾಡಿದೆ.
ಸಿಗರೇಟ್ ಪ್ಯಾಕ್ ಗಳಲ್ಲಿ ಈಗಿರುವ ಶೇಕಡಾ 20ರಷ್ಟು ಆರೋಗ್ಯ ಎಚ್ಚರಿಕೆ ಸಂದೇಶಗಳಿಂದ ಅದನ್ನು ಶೇಕಡಾ 85ರಷ್ಟು ಹೆಚ್ಚಿಸಬೇಕೆಂದು ಸರ್ಕಾರ ಹೊಸ ನೀತಿಯನ್ನು ಏಪ್ರಿಲ್ 1ರಿಂದ ಕಡ್ಡಾಯವಾಗಿ ಅನ್ವಯವಾಗುವಂತೆ ಜಾರಿಗೆ ತಂದಿದೆ. ಆದರೆ ಇದರ ವಿರುದ್ಧ ಕೆಲವು ಬೀಡಿಯಂತಹ ಸಿಗರೇಟು ತಯಾರಕರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ನ್ಯಾಯಾಲಯ ಉತ್ಪಾದಕರು ಸರ್ಕಾರದ ನೀತಿ ನಿಯಮಗಳನ್ನು ಅನುಸರಿಸುವುದು ಮುಖ್ಯ ಎಂದು ಹೇಳಿದೆ.
ಸರ್ಕಾರದ ನಿಯಮ ಪಾಲಿಸಲು ಬಹಳ ಕಠಿಣವಾಗಿದ್ದು, ಅಕ್ರಮ ಸಿಗರೇಟುಗಳ ಕಳ್ಳಸಾಗಣೆಗೆ ಹೊಸ ನಿಯಮ ದಾರಿಮಾಡಿಕೊಡಬಹುದು. ತಂಬಾಕು ವ್ಯಾಪಾರವನ್ನು ನಂಬಿಕೊಂಡು ಜೀವನ ನಡೆಸುತ್ತಿರುವ 50 ದಶಲಕ್ಷ ಜನರ ಜೀವನಾಧಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ತಂಬಾಕು ಕೈಗಾರಿಕೆಗಳು ನ್ಯಾಯಾಲಯಕ್ಕೆ ಹೇಳಿವೆ. ಸಿಗರೇಟು ಸೇವನೆ ಮಾಡುವವರು ಪ್ಯಾಕೆಟ್ ಗಳ ಮೇಲೆ ಎಷ್ಟೇ ಆರೋಗ್ಯದ ಮೇಲೆ ಅದು ಉಂಟು ಮಾಡುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದರೂ ಬಿಡುವುದಿಲ್ಲ ಎಂದು ಸಿಗರೇಟು ತಯಾರಿಕೆ ಕಂಪೆನಿಗಳು ಅರ್ಜಿಯಲ್ಲಿ ಹೇಳಿದೆ.
ತಂಬಾಕು ಸೇವನೆಯಿಂದ ಪ್ರತಿವರ್ಷ 9 ಲಕ್ಷ ಭಾರತೀಯರು ಸಾವನ್ನಪ್ಪುತ್ತಿದ್ದಾರೆ ಎಂದು ಸರ್ಕಾರದ ಅಂಕಿಅಂಶದಿಂದ ತಿಳಿದುಬಂದಿದೆ. ಈ ದಶಕ ಮುಗಿಯುವುದರೊಳಗೆ ಅದು 1.5 ದಶಲಕ್ಷಕ್ಕೆ ಮುಟ್ಟುವ ಸಾಧ್ಯತೆಯಿದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.