ದೇಶ

ಭಾರತದ ಭೌಗೋಳಿಕ ಚಿತ್ರಣ ಪಡೆಯಲು ಅನುಮತಿ ಬೇಕು: ಸರ್ಕಾರದಿಂದ ಶೀಘ್ರ ಶಾಸನ ಜಾರಿ

Sumana Upadhyaya

ನವದೆಹಲಿ: ಭಾರತದ ಭೌಗೋಳಿಕ ಚಿತ್ರಣ ಅಥವಾ ದಾಖಲೆಗಳನ್ನು ಅಂತರಿಕ್ಷ ಅಥವಾ ವೈಮಾನಿಕ ಸಮೀಕ್ಷೆ ಮೂಲಕ ಪಡೆಯಲಿಚ್ಛಿಸುವವರು ಮೊದಲು ಸರ್ಕಾರಿ ಅಧಿಕಾರಿಗಳಿಂದ ಅನುಮತಿ ಮತ್ತು ಪರವಾನಗಿ ಪಡೆಯಬೇಕು ಎಂದು ಕೇಂದ್ರ ಸರ್ಕಾರ ಸದ್ಯದಲ್ಲಿಯೇ ಕರಡು ಶಾಸನವನ್ನು ಜಾರಿಗೆ ತರಲಿದೆ.

ಪತ್ರಿಕೆಯೊಂದು ವರದಿ ಮಾಡಿರುವಂತೆ, ಸರ್ಕಾರದ ಅನುಮತಿ ಪಡೆಯದೆ ದೇಶದ ಭೌಗೋಳಿಕ ಚಿತ್ರಣ ತೆಗೆದುಕೊಂಡರೆ ಅವರಿಗೆ ಒಂದು ಕೋಟಿಯವರೆಗೆ ದಂಡ ಮತ್ತು 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು.

ಭೂವ್ಯೋಮ ಮಾಹಿತಿ ನಿಯಂತ್ರಣ ಮಸೂದೆಯನ್ನು ತರುವ ಚಿಂತನೆಯಲ್ಲಿ ಕೇಂದ್ರ ಸರ್ಕಾರವಿದ್ದು, ಅದು ಸ್ವಾಧೀನ, ಪ್ರಸರಣ, ಪ್ರಕಟಣೆ ಮತ್ತು ಭಾರತದ ಭೌಗೋಳಿಕ ಮಾಹಿತಿ ವಿತರಣೆ ನಿಯಂತ್ರಣವನ್ನು ಒಳಗೊಂಡಿರುತ್ತದೆ. ಗೂಗಲ್ ಕಂಪೆನಿ ಗೂಗಲ್ ಮ್ಯಾಪ್ ಹಾಗೂ ಗೂಗಲ್ ಅರ್ಥ್ ತೋರಿಸಲು ಸರ್ಕಾರದಿಂದ ಅನುಮತಿ ಪಡೆದುಕೊಳ್ಳಬೇಕು.

ಇದಲ್ಲದೆ ಸರ್ಕಾರ ಸ್ಥಾಪಿಸಿದ ಭದ್ರತಾ ಪರಿಶೀಲನಾ ಪ್ರಾಧಿಕಾರ ಭಾರತದ ಭದ್ರತೆ, ಸಾರ್ವಭೌಮತೆ ಸಮಗ್ರತೆಯನ್ನು ರಕ್ಷಿಸಲು ಸೂಕ್ಷ್ಮ ತಪಾಸಣೆ ನಡೆಸಲಿದೆ.ಕರಡು ಶಾಸನದಂತೆ, ಭಾರತದ ಯಾವುದೇ ಭಾಗದ ಭೌಗೋಳಿಕ ಚಿತ್ರಣ ಹಾಗೂ ದಾಖಲೆಗಳನ್ನು ಉಪಗ್ರಹ, ವಿಮಾನ, ವಾಯುನೌಕೆಗಳು, ಬಲೂನುಗಳು, ಮಾನವರಹಿತ ವಾಹನಗಳು ಅಥವಾ ಪ್ರಾದೇಶಿಕ ವಾಹನಗಳ ಮೂಲಕ ಭದ್ರತಾ ಪರಿಶೀಲನಾ ಪ್ರಾಧಿಕಾರದ ಅನುಮತಿಯಿಲ್ಲದೆ ತೆಗೆಯುವಂತಿಲ್ಲ. ಒಂದು ವೇಳೆ ತೆಗೆದರೆ ಜೈಲು ಶಿಕ್ಷೆ ಮತ್ತು ದಂಡ ಕಟ್ಟಬೇಕಾಗುತ್ತದೆ. ಆದರೆ ಈ ನಿಯಮ ಭಾರತ ಸರ್ಕಾರದ ಅಂಗಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ.

SCROLL FOR NEXT