ಕೊಲ್ಕತ್ತಾ: ವಿವೇಕ್ ಅಗ್ನಿಹೋತ್ರಿ ಅವರ 'ಬುದ್ಧ ಇನ್ ಎ ಟ್ರಾಫಿಕ್ ಜಾಮ್' ಎಂಬ ಸಿನಿಮಾದ ಓಪನ್ ಏರ್ ಸ್ಕ್ರೀನಿಂಗ್ ನಡೆಯುತ್ತಿದ್ದ ವೇಳೆ ವಿದ್ಯಾರ್ಥಿನಿಯರನ್ನು ಚುಡಾಯಿಸಿದ ವಿಷಯದಲ್ಲಿ ಘರ್ಷಣೆಯುಂಟಾಗಿದ್ದು ಚುಡಾಯಿಸಿದ ವ್ಯಕ್ತಿಗಳ ವಿರುದ್ಧ ಜಾದವ್ಪುರ್ ವಿವಿಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಲೇಜು ಕ್ಯಾಂಪಸ್ನಲ್ಲಿ ಸ್ಕ್ರೀನಿಂಗ್ ನಡೆಯುತ್ತಿದ್ದ ವೇಳೆ ಎಡರಂಗದ ವಿದ್ಯಾರ್ಥಿ ಸಂಘಟನೆ ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದೆ. ಜೆಯು ಅಲುಮಿನಿ ಅಸೋಸಿಯೇಷನ್ ಕಾಲೇಜಿನ ತ್ರಿಗುಣಾ ಸೆನ್ ಆಡಿಟೋರಿಯಂನ್ನು ಸ್ಕ್ರೀನಿಂಗ್ಗಾಗಿ ನೀಡಿ, ಆಮೇಲೆ ಆ ಅನುಮತಿಯನ್ನು ರದ್ದುಗೊಳಿಸಲಾಗಿತ್ತು. ಈ ವೇಳೆ ಕಾಲೇಜು ಕ್ಯಾಂಪಸ್ನಲ್ಲಿ ಸಂಘರ್ಷವೇರ್ಪಟ್ಟಿತ್ತು ಎಂದು ಹೇಳಲಾಗುತ್ತಿದೆ.
ಪುಣೆ ಮೂಲದ ಸಂಘಟನೆ ಮತ್ತು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಸ್ಕ್ರೀನಿಂಗ್ ಏಕಕಾಲದಲ್ಲಿ ನಡೆಯುತ್ತಿತ್ತು. ಸ್ಕ್ರೀನಿಂಗ್ ಏಕಕಾಲದಲ್ಲಿ ಆರಂಭವಾಗಿ ಎಲ್ಲವೂ ಶಾಂತಿಯುತವಾಗಿ ನಡೆಯುತ್ತಿದ್ದಂತೆಯೇ ಅಲ್ಲಿ ಸಂಘರ್ಷ ನಡೆದಿತ್ತು. ಕಾಲೇಜಿನ ಉಪ ಕುಲಪತಿ ಸುರಂಜನ್ ದಾಸ್ ಅವರ ಪ್ರಕಾರ ಹೊರಗಿನಿಂದ ಬಂದ ವ್ಯಕ್ತಿಗಳು ವಿದ್ಯಾರ್ಥಿನಿಯರನ್ನು ಚುಡಾಯಿಸಿದ್ದಾರೆ ಎಂಬ ದೂರು ನಮಗೆ ಸಿಕ್ಕಿದೆ. ಈ ವೇಳೆ ಅಲ್ಲಿ ವಿದ್ಯಾರ್ಥಿಗಳ ನಡುವೆ ಸಂಘರ್ಷವೇರ್ಪಟ್ಟಿದೆ. ವಿದ್ಯಾರ್ಥಿನಿಯರನ್ನು ಚುಡಾಯಿಸಿದ ವ್ಯಕ್ತಿಗಳನ್ನು ಪೊಲೀಸರ ವಶಕೊಪ್ಪಿಸಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ವಿವಿಯ ಅಧಿಕಾರಿಗಳು ಹೇಳಿದ್ದಾರೆ.