ಹೈದ್ರಾಬಾದ್: ಚೆಕ್ ಬೌನ್ಸ್ ಪ್ರಕರಣವೊಂದರ ತಪಿತಸ್ಥನಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಶಿಕ್ಷೆ ಜಾರಿಯನ್ನು ನ್ಯಾಯಾಲಯ ಮೇ 25ಕ್ಕೆ ಮುಂದೂಡಿದೆ.
ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಿಎಂಆರ್ ಹೈದ್ರಾಬಾದ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ ಸಲ್ಲಿಸಿದ್ದ ಚೆಕ್ ಬೌನ್ಸ್ ಪ್ರಕರಣದ ವಿಚಾರಣನೆ ನಡೆಸಿದ ಹೈದ್ರಾಬಾದ್ ನ್ಯಾಯಾಲಯವು ಮಲ್ಯರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣ ಆದೇಶವನ್ನು ಕಾಯ್ದಿರಿಸಿತ್ತು. ಆದರೆ, ಮಲ್ಯ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಶಿಕ್ಷೆಯ ಜಾರಿಯನ್ನು ನ್ಯಾಯಾಲಯ ಮೇ 25ಕ್ಕೆ ಮುಂದೂಡಿದೆ.
ಮಲ್ಯ ವಿರುದ್ಧ ಎರಡು ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿತ್ತು. ನ್ಯಾಯಾಲಯ ಸೆಕ್ಷನ್ 138ರ ಅಡಿಯಲ್ಲಿ ಮಲ್ಯ, ಕಿಂಗ್ ಫಿಶರ್ ಹಾಗೂ ಏರ್ ಲೈನ್ಸ್ ಹಿರಿಯ ಅಧಿಕಾರಿಗಳು ತಪ್ಪಿತಸ್ಥರೆಂದು ತೀರ್ಪು ನೀಡಿತ್ತು. ಮೇ 5ಕ್ಕೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದು ಎಂದು ತಿಳಿಸಿತ್ತು. ಆದರೆ ಮಲ್ಯ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಶಿಕ್ಷೆಯ ಪ್ರಮಾಣ ಪ್ರಕಟಿಸಿರಲಿಲ್ಲ.
ಸುಮಾರು 9 ಸಾವಿರ ಕೋಟಿ ರು.ಗೂ ಅಧಿಕ ಸಾಲದ ಹೊರೆ ಹೊತ್ತಿರುವ ಮಲ್ಯ ಅವರು ಮಾರ್ಚ್ ತಿಂಗಳಿನಲ್ಲಿ ದೇಶ ಬಿಟ್ಟು ಇಂಗ್ಲೆಂಡಿಗೆ ಪರಾರಿಯಾಗಿದ್ದಾರೆ.