ದೇಶ

ಪಿವಿ ನರಸಿಂಹ ರಾವ್ ಅವರಿಗೆ ಕಾಂಗ್ರೆಸ್ ಪಕ್ಷದ ಮೇಲೆ ಹಿಡಿತ ಇರಲಿಲ್ಲ: ತರುಣ್ ಗೊಗೊಯ್

Srinivas Rao BV

ನವದೆಹಲಿ: ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದಾಗ ಹಲವು ಸುಧಾರಣೆಗಳನ್ನು ಜಾರಿಗೆ ತಂದರಾದರೂ ಕಾಂಗ್ರೆಸ್ ಪಕ್ಷದ ಮೇಲೆ ಹಿಡಿತ ಹೊಂದಿರಲಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಹೇಳಿದ್ದಾರೆ.

ಕೇಂದ್ರದಲ್ಲಿ ತಾವು ಆಹಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದ ವೇಳೆ ಸಂಭವಿಸಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ನಿರ್ವಹಿಸಿದ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬರೆದಿದ್ದ ಪತ್ರಕ್ಕೆ ಪಿವಿ ನರಸಿಂಹ ರಾವ್ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ತರುಣ್ ಗೊಗೊಯ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

1992 ರಲ್ಲಿ ನಡೆದಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಅಂದಿನ ಪ್ರಧಾನಿ ನರಸಿಂಹ ರಾವ್ ನಿರ್ವಹಿಸಿದ್ದನ್ನು ತಮ್ಮ ಪುಸ್ತಕ ಟರ್ನ್ ಅರೌಂಡ್- ಲೀಡಿಂಗ್ ಅಸ್ಸಾಂ ಫ್ರಮ್ ದಿ ಫ್ರಂಟ್ ನಲ್ಲಿ ನೆನಪಿಸಿಕೊಂಡಿರುವ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್, ಪಿವಿ ನರಸಿಂಹ ರಾವ್ ಅವರು ಹಲವು ಸುಧಾರಣೆಗಳನ್ನು ಜಾರಿಗೆ ತಂದಿದ್ದರು,  ಸಂಪುಟ ಸಹೋದ್ಯೋಗಿಗಳ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಆಹಾರ ಸಚಿವನಾಗಿದ್ದ ನಾನು ಹಲವು ನಿರ್ಧಾರಗಳನ್ನು ಸ್ವತಂತ್ರವಾಗಿ ಕೈಗೊಂಡಿದ್ದೆ, ಆದರೆ ಅವರಿಗೆ ಕಾಂಗ್ರೆಸ್ ಮೇಲೆ ಹಿಡಿತವಿರಲಿಲ್ಲ ಎಂದು ಹೇಳಿದ್ದಾರೆ.
 
ತರುಣ್ ಗೊಗೊಯ್ ಅವರ ಪುಸ್ತಕ ಟರ್ನ್ ಅರೌಂಡ್- ಲೀಡಿಂಗ್ ಅಸ್ಸಾಂ ಫ್ರಮ್ ದಿ ಫ್ರಂಟ್ ಮೇ.14 ರಂದು ಬಿಡುಗಡೆಯಾಗಿದ್ದು, ಇದರಲ್ಲಿ ನರಸಿಂಹರಾವ್ ಸಂಪುಟದಲ್ಲಿ ಕಾರ್ಯನಿರ್ವಹಿಸಿದ್ದು ಸೇರಿದಂತೆ ಅಂದಿನ ಪ್ರಮುಖ ಘಟನಾವಳಿಗಳ ಕುರಿತು ಬರೆದಿದ್ದಾರೆ.

SCROLL FOR NEXT