ತಿರುವನಂತಪುರ: ಕೇರಳ ರಾಜ್ಯ ರಾಜಕೀಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಪಕ್ಷ ತನ್ನ ಮೊದಲ ಚುನಾವಣಾ ಗೆಲುವು ದಾಖಲಿಸುವ ಮೂಲಕ ಇತಿಹಾಸ ಬರೆದಿದೆ.
ಎಲ್ ಡಿಎಫ್ ಮತ್ತು ಯುಡಿಎಫ್ ಪಕ್ಷಗಳ ಅಬ್ಬರದಲ್ಲಿ ಕಳೆದು ಹೋಗಿದ್ದ ಬಿಜೆಪಿ, ಕೇರಳದಲ್ಲಿ ಕೊನೆಗೂ ತನ್ನ ಖಾತೆ ತೆರೆದಿದೆ. ಕೇರಳದ ನೇಮಮ್ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಓ.ರಾಜಗೋಪಾಲ್ ಅವರು ಗೆಲ್ಲುವ ಮೂಲಕ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿದ್ದಾರೆ. 84 ವರ್ಷದ ರಾಜಗೋಪಾಲ ಅವರು ಸಿಪಿಐಎಂನ ವಿ ಸಿವನ್ ಕುಟ್ಟಿ ಅವರನ್ನು ಮಣಿಸಿ ಇತಿಹಾಸ ನಿರ್ಮಿಸಿದ್ದಾರೆ.
ಉಳಿದಂತೆ ಎಲ್ಡಿಎಫ್ ಅಭ್ಯರ್ಥಿ ಕಡಕಂಪಳಿಳ ಸುರೇಂದ್ರನ್ ಅವರು ತಿರುವನಂತಪುರ ಜಿಲ್ಲೆಯ ಕಳಕೂಟ್ಟಂ ಕ್ಷೇತ್ರದಲ್ಲಿ ತಮ್ಮ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಮುರಳೀಧರನ್ ಅವರನ್ನು 7,347 ಮತಗಳಿಂದ ಸೋಲಿಸಿದ್ದಾರೆ. ಸಿಪಿಎಂ ನ ವೀಣಾ ಜಾರ್ಜ್ ಅವರು ಅರಣ್ಮೂಲ ಕ್ಷೇತ್ರದಿಂದ ಜಯ ಗಳಿಸಿದ್ದು, ಕಾಂಗ್ರೆಸ್ ನಾಯಕ ಪಿ ಟಿ ಥಾಮಸ್ ಅವರು ತೃಕ್ಕಕರ ಕ್ಷೇತ್ರದಿಂದ ಜಯ ಗಳಿಸಿದ್ದಾರೆ. ಸಿಪಿಎಂನ ವಿ ಜಾಯ್ ಅವರು ವರ್ಕಳದಲ್ಲಿ ಹಾಲಿ ಕಾಂಗ್ರೆಸ್ ಶಾಸಕ ವರ್ಕಳ ಕಹಾರ್ ವಿರುದ್ಧ 2,386 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಚಟ್ಟನೂರು ಕ್ಷೇತ್ರದಿಂದ ಹಾಲಿ ಶಾಸಕ ಜಿ ಎಸ್ ಜಯಲಾಲ್ಅವರು ಬಿಜೆಪಿ ಎದುರಾಳಿ ಬಿ ಬಿ ಗೋಪಕುಮಾರ್ ಅವರ ವಿರುದ್ಧ 34,407 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.