ನವದೆಹಲಿ: ಕಾಂಗ್ರೆಸ್ ಈ ಬಾರಿಯಾದರೂ ತನ್ನ ಕ್ಲೀಷೆಯ ಆತ್ಮಾವಲೋಕನ ವಿಷಯದಿಂದ ಆಚೆಬಂದು ಗಂಭೀರ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಲೋಕಸಭಾ ಸದಸ್ಯ ಶಶಿ ತರೂರ್ ಹೇಳಿದ್ದಾರೆ. ಪಂಚರಾಜ್ಯಗಳ ಫಲಿತಾಂಶದಲ್ಲಿ ಇಂದು ಮತ್ತೊಮ್ಮೆ ಕಾಂಗ್ರೆಸ್ ಭಾರೀ ವೈಫಲ್ಯ ಕಂಡ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಅಸ್ಸಾಂ ಮತ್ತು ಕೇರಳ ರಾಜ್ಯಗಳಲ್ಲಿ ಈ ಬಾರಿ ಸೋಲು ಕಂಡಿದ್ದು, ಉಳಿದ ಮೂರು ರಾಜ್ಯಗಳಲ್ಲಿ ಕೂಡ ಅದಕ್ಕೆ ಉತ್ತಮ ಫಲಿತಾಂಶ ಸಿಕ್ಕಿಲ್ಲ. ಇದಕ್ಕೆ ಪಕ್ಷದ ಕೇಂದ್ರ ನಾಯಕತ್ವ ಹೊಂದಿರುವ ಗಾಂಧಿ ಕುಟುಂಬವನ್ನು ಹೊಣೆಯಾಗಿಸಲು ಸಾಧ್ಯವಿಲ್ಲ ಎಂದು ತರೂರ್ ಹೇಳಿದರು.
ಕೇರಳದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ 93 ವರ್ಷದ ವಿ.ಎಸ್. ಅಚ್ಯುತಾನಂದನ್ ಎಲ್ ಡಿಎಫ್ ನ ಜಯದಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಜಯಕ್ಕೆ ಕೇರಳದಲ್ಲಿ ಕಾರ್ಯತಂತ್ರ ರೂಪಿಸಬೇಕಾಗಿದೆ ಎಂದರು.
ಎಲ್ಲಾ ರಾಜ್ಯ ಚುನಾವಣೆಗಳು ರಾಷ್ಟ್ರ ನಾಯಕತ್ವದ ಬಗೆಗಿನ ಜನಾಭಿಪ್ರಾಯವಲ್ಲ. ವಿಧಾನಸಭಾ ಚುನಾವಣೆಗಳಿಗೆ ಸ್ಥಳೀಯ ವಿಷಯಗಳು ಕೂಡ ಕಾರಣವಾಗುತ್ತವೆ. ಪಕ್ಷವೆಂದ ಮೇಲೆ ಅಲ್ಲಿ ಅನುಭವ ಹೊಂದಿರುವ ಹಿರಿಯ ರಾಜಕಾರಣಿಗಳೂ ಇರಬೇಕು. ಆದರೆ ಪಕ್ಷವನ್ನು ಮೇಲೆತ್ತಲು, ಹೊಸ ಹುರುಪು ಹುಟ್ಟಿಸಲು ಯುವ ನಾಯಕರ ಅಗತ್ಯವಿದೆ ಎಂದು ತರೂರ್ ಅಭಿಪ್ರಾಯಪಟ್ಟರು.
ಇನ್ನು ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಜನರು ನೀಡಿರುವ ತೀರ್ಪನ್ನು ವಿನೀತಭಾವದಿಂದ ಸ್ವೀಕರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಯತ್ತ ದೃಷ್ಟಿ ಹರಿಸುತ್ತೇವೆ ಎಂದಿದ್ದಾರೆ. ರಾಹುಲ್ ಗಾಂಧಿ ಮುಂದಾಳತ್ವದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು.
ಅಸ್ಸಾಂನಲ್ಲಿ 15 ವರ್ಷಗಳ ಆಡಳಿತ ನಡೆಸಿದ್ದ ಕಾಂಗ್ರೆಸ್ ಈ ಬಾರಿ ಸೋಲನುಭವಿಸಿದೆ. ಈಶಾನ್ಯ ರಾಜ್ಯದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದೆ. ಇನ್ನು ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಎಡರಂಗದಿಂದ ಎಲ್ ಡಿಎಫ್ ನತ್ತ ಜನ ಒಲವು ತೋರಿಸಿದ್ದಾರೆ. ಈಗ ಸದ್ಯಕ್ಕೆ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಏಕೈಕ ಪಕ್ಷವಾಗಿ ಅಧಿಕಾರ ನಡೆಸುತ್ತಿದೆ.