ದೇಶ

ನೂತನ ಸಿಎಂ ಜಯಲಲಿತಾ ಸಂಪುಟದಲ್ಲಿ ಹೊಸಬರಿಗೆ ಆಧ್ಯತೆ

Srinivasamurthy VN

ಚೆನ್ನೈ: ಇತ್ತೀಚೆಗಷ್ಟೇ ಮುಕ್ತಾಯವಾದ ತಮಿಳುನಾಡು ವಿಧಾನಸಕ್ಷೆ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿರುವ ಜಯಲಲಿತಾ ನೇತೃತ್ವದ ಎಐಎಡಿಎಂಕೆ ನೂತನ ಸರ್ಕಾರದ ಸಚಿವ ಸಂಪುಟದಲ್ಲಿ ಹೊಸಬರಿಗೆ ಆಧ್ಯತೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಶನಿವಾರವಷ್ಟೇ ಎಐಎಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಜೆ.ಜಯಲಲಿತಾ ಅವರು 29 ಮಂದಿ ಹೆಸರುಗಳ ಸಚಿವ ಸಂಪುಟದ ಪಟ್ಟಿಯನ್ನು ಅಂತಿಮಗೊಳಿಸಿದ್ದರು. ಈ ಪಟ್ಟಿಯಲ್ಲಿ ಈ ಹಿಂದೆ ಸಚಿವರಾಗಿದ್ದ ಕೆಲ ಪ್ರಭಾವಿ ಸಚಿವರು ಸೇರಿದಂತೆ, ಹಿರಿಯರು, ಯುವಕರು ಸೇರಿದಂತೆ ಹೊಸ ಮುಖಗಳಿಗೆ ಅವಕಾಶ ನೀಡಲು ಜಯಲಲಿತಾ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ 13 ಮಂದಿ ಹೊಸಬರು ಮತ್ತು ಈ ಹಿಂದಿನ ಸರ್ಕಾರದಲ್ಲಿ ಕಾರ್ಯ ನಿರ್ವಹಿಸಿದ 12 ಮಂದಿಗೆ ಅವಕಾಶ ನೀಡಲು ಜಯಾ ನಿರ್ಧರಿಸಿದ್ದಾರೆ. ಮಾಜಿ ಸ್ಪೀಕರ್ ಪಿ ಜಯಕುಮಾರ್, ಸಿವಿ ಶಣ್ಮುಗಂ, ಸಂಪುಟಕ್ಕೆ ವಾಪಸಾಗಲಿದ್ದು, ದಿಂಡಿಗಲ್ ಸಿ ಶ್ರೀನಿವಾಸನ್, ಒಎಸ್ ಮೇನಿಯನ್, ಡಾ.ವಿ ಸರೋಜಾ ಅವರು ಕೂಡ ಸರ್ಕಾರದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.

ಈಗಾಗಲೇ ಎಲ್ಲಾ 29 ಮಂದಿ ಸಚಿವರ ಹೆಸರುಗಳುಳ್ಳ ಪಟ್ಟಿಯನ್ನು ತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ ಅವರಿಗೆ ನೀಡಲಾಗಿದ್ದು, ನಾಳೆ ನೂತನ ಸಿಎಂ ಮತ್ತು ನೂತನ ಸಚಿವರಿಗೆ ಪ್ರಮಾಣವಚನ ಭೋಧಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಮದ್ರಾಸ್ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಮದ್ರಾಸ್ ವಿವಿ ಆವರಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.

SCROLL FOR NEXT