ಚೆನ್ನೈ: ಡಿಎಂಕೆ ನಾಯಕ ಸ್ಟ್ಯಾಲಿನ್ ಮತ್ತು ಡಿಎಂಕೆ ಪಕ್ಷಕ್ಕೆ ಅಗೌರವ ತೋರುವ ಉದ್ದೇಶ ಹೊಂದಿರಲಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹೇಳಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸ್ಟ್ಯಾಲಿನ್ ಆಗಮಿಸಿದ್ದು ಸಂತಸ ತಂದಿದ್ದು, ಸಮಾರಂಭದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ.
ಎಂ ಕೆ ಸ್ಟ್ಯಾಲಿನ್ ಅವರಿಗೆ ಶಾಸಕರು, ಮಾಜಿ ಸಚಿವರೊಂದಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ಎಂದು ಡಿಎಂಕೆ ನಾಯಕ ಎಂ ಕರಣಾನಿಧಿ ಆರೋಪ ಮಾಡಿದ್ದರು.
ಆರೋಪವನ್ನು ತಳ್ಳಿ ಹಾಕಿರುವ ಜಯಲಲಿತಾ, ಉದ್ದೇಶ ಪೂರ್ವಕವಾಗಿ ಸ್ಟ್ಯಾಲಿನ್ ಅವರನ್ನು ಹಿಂಬದಿಯಲ್ಲಿ ಕೂರಿಸಿಲ್ಲ. ಸಾರ್ವಜನಿಕ ಇಲಾಖೆಗೆ ಪ್ರೋಟಾಕಾಲ್ ಕೈಪಿಡಿ ಆಧಾರದ ಮೇಲೆ ಕುರ್ಚಿಗಳನ್ನು ವ್ಯವಸ್ಥೆ ಮಾಡಿ ಎಂದು ಸೂಚಿಸಲಾಗಿತ್ತು. ಆದರೆ, ಅಲ್ಲಿ ಏನೋ ತಪ್ಪಾಗಿದೆ. ಇದರಿಂದ ಸ್ಟ್ಯಾಲಿನ್ ಅವರಿಗೆ ಅಸಮಾಧಾನವಾಗಿದೆ ಎಂದು ಅರ್ಥವಾಗುತ್ತದೆ. ಸ್ಟ್ಯಾಲಿನ್ ಕಾರ್ಯಕ್ರಮಕ್ಕೆ ಬಂದಿದ್ದಾರೆಂಬುದು ನನ್ನ ಗಮನಕ್ಕೆ ಬಂದಿದ್ದರೆ, ಅಧಿಕಾರಿಗಳಿಗೆ ಅವರನ್ನು ಮೊದಲ ಸಾಲಿನಲ್ಲಿ ಕೂರಿಸಲು ಸೂಚಿಸುತ್ತಿದ್ದೆ. ಆದರೆ, ಅವರು ಬಂದಿರುವುದಾಗಿ ಯಾರು ನನಗೆ ಮಾಹಿತಿ ನೀಡಿರಲಿಲ್ಲ ಎಂದು ಅವರು ಜಯಲಲಿತಾ ಸ್ಪಷ್ಟನೇ ನೀಡಿದ್ದಾರೆ.
ಡಿಎಂಕೆ ಮುಖಂಡ ಸ್ಟ್ಯಾಲಿನ್ ಗೆ 16 ನೇ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಟ್ಯಾಲಿನ್ ಅವರೊಂದಿಗೆ ಡಿಎಂಕೆ ಮಾಜಿ ಸಚಿವರಾದ ಎವಿ ವೇಲು, ಶಾಸಕರಾದ ಶೇಖರ್ ಬಾಬು, ಸೆಲ್ವಂ ಸರಿದಂತೆ ಡಿಎಂಕೆ ಮಾಜಿ ಸಚಿವ, ಶಾಸಕರಿಗೂ ಆಸನ ವ್ಯವಸ್ಥೆ ಮಾಡಲಾಗಿತ್ತು.