ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಕಳೆದ 17 ವರ್ಷಗಳಲ್ಲೇ ಅತಿ ಹೆಚ್ಚು ವಾಮು ಮಾಲಿನ್ಯ ಪೀಡಿತ ಪ್ರದೇಶವಾಗಿದ್ದು, ಜನರು ಉಸಿರಾಡಲೂ ಕಷ್ಟಪಡುವಂಥ ಪರಿಸ್ಥಿತಿಯನ್ನು ಸೃಷ್ಟಿಸಿದೆ.
ಮಿತಿಮೀರಿದ ವಾಯು ಮಾಲಿನ್ಯದಿಂದಾಗಿ ಜನರಿಗೆ ಉಸಿರಾಟ ತೊಂದರೆ, ಅಸ್ತಮಾ, ಕಣ್ಣುರಿ ಹಾಗೂ ಅಲರ್ಜಿ ಪ್ರಕರಗಳು ಹೆಚ್ಚುತ್ತಿವೆ ಎಂದು ವೈದ್ಯರು ಮತ್ತು ತಜ್ಞರು ತಿಳಿಸಿದ್ದಾರೆ.
ಈ ಮುಂಚೆ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದಾಗಿ ಶೇ.15ರಿಂದ 20ರಷ್ಟು ರೋಗಿಗಳು ನಮ್ಮ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಆದರೆ ಈಗ ಶೇ.60ರಷ್ಟು ರೋಗಿಗಳು ದಾಖಲಾಗುತ್ತಿದ್ದಾರೆ. ಈ ಪೈಕಿ ಹೆಚ್ಚಿನವರು ಉಸಿರಾಟದ ಸಮಸ್ಯೆಯಿಂದ ದಾಖಲಾಗಿದ್ದಾರೆ ಎಂದು ಸರ್ ಗಂಗಾರಾಮ್ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಎಸ್ ಪಿ ಬೋಟ್ರಾ ಅವರು ಹೇಳಿದ್ದಾರೆ.
ಹೊಗೆ ಮತ್ತು ಮಾಲಿನ್ಯನಿದಿಂದಾಗಿ ಮಕ್ಕಳು ಮತ್ತು ವಯಸ್ಸಾದವರು ಹೆಚ್ಚು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದು, ಇವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯ ಇದೆ. ಮಕ್ಕಳು ಮತ್ತು ವಯಸ್ಸಾದವರು ಬೆಳಗಿನ ಜಾವ ಮತ್ತು ವಾಯು ಮಾಲಿನ್ಯ ಹೆಚ್ಚಾಗಿರುವ ಸಮಯದಲ್ಲಿ ಮನೆಯಿಂದ ಹೊರಗಡೆ ಹೋಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.
ಸಾಮಾನ್ಯವಾಗಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ದೆಹಲಿಯ ಅಕ್ಕಪಕ್ಕದ ರಾಜ್ಯಗಳಲ್ಲಿ ರೈತರು ಭತ್ತದ ಬೆಳೆಯ ಅವಶೇಷಗಳನ್ನು ಸುಡಲು ಆರಂಭಿಸುತ್ತಾರೆ. ಇದೇ ವೇಳೆ ಪಶ್ಚಿಮದಿಂದ ಪೂರ್ವಕ್ಕೆ ಗಾಳಿ ಬೀಸಲಾರಂಭಿಸುತ್ತದೆ. ಆಗ ಕೃಷಿ ತ್ಯಾಜ್ಯದ ಹೊಗೆಯು ಪಶ್ಚಿಮದ ರಾಜ್ಯಗಳಿಂದ ದೆಹಲಿಯತ್ತ ಬೀಸಿ ಹೊಗೆಮಾಲಿನ್ಯ ಸೃಷ್ಟಿಸುತ್ತದೆ. ಈ ಸಲ ಎಲ್ಲ ಅಪಾಯದ ಮಟ್ಟವನ್ನೂ ಮೀರಿ ವಾಯುಮಾಲಿನ್ಯ ತಲೆದೋರಿದೆ.