ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ಮಿತಿಮೀರಿದ ವಾಯು ಮಾಲಿನ್ಯಕ್ಕೆ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರು ಭತ್ತದ ಬೆಳೆಯ ಅವಶೇಷ ಸುಡುತ್ತಿರುವುದು ಕಾರಣ ಎಂದಿದ್ದ ದೆಹಲಿ ಸರ್ಕಾರದ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಕೇಂದ್ರ ಸರ್ಕಾರ, ಶೇ.80ರಷ್ಟು ಸ್ಥಳೀಯ ಸಂಗತಿಗಳೇ ಕಾರಣ ಎಂದು ಸೋಮವಾರ ಹೇಳಿದೆ.
ಇಂದು ದೆಹಲಿ ಹಾಗೂ ನೆರೆಯ ರಾಜ್ಯಗಳ ಪರಿಸರ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಪರಿಸರ ಸಚಿವ ಅನಿಲ್ ದಾವೆ ಅವರು, ದೆಹಲಿಯ ವಾಯು ಮಾಲಿನ್ಯಕ್ಕೆ ಶೇ.80ರಷ್ಟು ಸ್ಥಳೀಯ ಸಂಗತಿಗಳೇ ಕಾರಣ ಎಂಬುದುನ್ನು ನಾವು ಅರ್ಥ ಮಾಡಿಕೊಳ್ಳಬೇಕು ಮತ್ತು ಶೇ.20ರಷ್ಟು ನೆರೆಯ ರಾಜ್ಯಗಳು ಕಾರಣ ಎಂದು ಹೇಳಿದರು.
ಒಕ್ಕೂಟ ವ್ಯವಸ್ಥೆಯ ಇತಿಮಿತಿಗಳನ್ನು ಅರ್ಥ ಮಾಡಿಕೊಂಡು ರಾಜ್ಯ ಸರ್ಕಾರಗಳು ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ದೆಹಲಿ ವಾಯು ಮಾಲಿನ್ಯಕ್ಕೆ ದೂಳು ಪ್ರಮುಖ ಕಾರಣವಾಗಿದ್ದು, ಇದನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಕೂಡಲೇ ತುಂತುರು ನೀರು ಸಿಂಪಡಿಸಬೇಕು. ಸುಮಾರು ಎರಡು ಕೋಟಿ ಜನ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆರೋಪ ಪ್ರತ್ಯಾರೋಪ ಮಾಡುವ ಬದಲು ಸಮಸ್ಯೆ ಪರಿಹಾರಕ್ಕೆ ಆಪ್ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿ ಎಂದಿದ್ದಾರೆ.
ದೆಹಲಿಯ ಅಕ್ಕಪಕ್ಕದ ರಾಜ್ಯಗಳಲ್ಲಿ ರೈತರು ಭತ್ತದ ಬೆಳೆಯ ಅವಶೇಷಗಳನ್ನು ಸುಡಲು ಆರಂಭಿಸಿದ್ದು, ಕೃಷಿ ತ್ಯಾಜ್ಯದ ಹೊಗೆಯು ಪಶ್ಚಿಮದ ರಾಜ್ಯಗಳಿಂದ ದೆಹಲಿಯತ್ತ ಬೀಸಿ ಹೊಗೆಮಾಲಿನ್ಯ ಸೃಷ್ಟಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದರು.