ಚೆನ್ನೈಯ ಗೋಪಾಲಪುರಂನಲ್ಲಿ ಪರೀಕ್ಷಾ ಕೇಂದ್ರವೊಂದರಿಂದ ಕಳೆದ ಭಾನುವಾರ ಐಐಟಿ ಪ್ರವೇಶ ಪರೀಕ್ಷೆ ಬರೆದು ಹೊರಬರುತ್ತಿರುವ ವಿದ್ಯಾರ್ಥಿಗಳು ಮತ್ತು ಅವರೊಂದಿಗೆ ಪೋಷಕರು.
ಚೆನ್ನೈ: ಸಂಯುಕ್ತ ಪ್ರವೇಶ ಪರೀಕ್ಷೆ(ಜೆಇಇ)ಗೆ ಮುಂದಿನ ವರ್ಷ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಧಾರ್ ಕಾರ್ಡನ್ನು ಸಲ್ಲಿಸಬೇಕು, ಇಲ್ಲದಿದ್ದರೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಿಲ್ಲ ಎಂಬ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ನಡೆ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ಷೇಪವೆತ್ತುವಂತೆ ಮಾಡಿದೆ.
ಪ್ರವೇಶ ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳ ಹೆಸರು, ಲಿಂಗ, ಜನ್ಮ ದಿನಾಂಕ ಮೊದಲಾದ ದಾಖಲೆಗಳನ್ನು ಪರೀಶೀಲಿಸುವಂತೆ, ಏನಾದರೂ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುವಂತೆಯೂ ಸಿಬಿಎಸ್ ಇ ಹೇಳಿದೆ. ಆನ್ ಲೈನ್ ಅರ್ಜಿ ಪ್ರಕ್ರಿಯೆ ಡಿಸೆಂಬರ್ 1ರಂದು ಆರಂಭವಾಗಲಿದ್ದು ಜನವರಿ 2ರಂದು ಮುಕ್ತಾಯಗೊಳ್ಳಲಿದೆ. ಈ ಮಧ್ಯೆ ಆಧಾರ್ ಕಾರ್ಡು ಹೊಂದಿಲ್ಲದವರಿಗೆ ಅರ್ಜಿ ಹಾಕಿ ಕಾರ್ಡು ಮಾಡಿಸಿಕೊಳ್ಳಲು ಅಥವಾ ತಪ್ಪನ್ನು ತಿದ್ದಿಕೊಳ್ಳಲು ಕೇವಲ ಒಂದು ತಿಂಗಳು ಸಮಯಾವಕಾಶವಿರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ, ಅಸಮಾಧಾನವುಂಟಾಗಿದೆ. ಪರೀಕ್ಷೆಗೆ ಸಿದ್ಧತೆ ನಡೆಸುವುದನ್ನು ಬಿಟ್ಟು ಆಧಾರ್ ಕಾರ್ಡು ಪಡೆಯಲು ಅಥವಾ ಅದರಲ್ಲಿನ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಎಂದು ಗೊಣಗಿಕೊಳ್ಳುತ್ತಿದ್ದಾರೆ.
ಕಳೆದ ವರ್ಷವಷ್ಟೇ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ಯೋಜನೆಗಳಾದ ಸಾರ್ವಜನಿಕ ವಿತರಣಾ ವ್ಯವಸ್ಥೆ, ಎಲ್ ಪಿಜಿ ಯೋಜನೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ, ಪ್ರಧಾನ ಮಂತ್ರಿಗಳ ಜನ ಧನ ಯೋಜನೆ ಮತ್ತು ನೌಕರರ ಭವಿಷ್ಯ ನಿಧಿ ಯೋಜನೆಗಳಿಗೆ ಜನರು ಸ್ವಯಂ ಪ್ರೇರಿತರಾಗಿ ಆಧಾರ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಆದೇಶ ಹೊರಡಿಸಿತ್ತು.ಹಾಗಾಗಿ ಪ್ರವೇಶ ಪರೀಕ್ಷೆಗೆ ಕಡ್ಡಾಯ ಮಾಡಿರುವುದು ಕೋರ್ಟ್ ನ ಆದೇಶಕ್ಕೆ ವಿರುದ್ಧವಾಗಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.
ಶಿಕ್ಷಣ ಕಾರ್ಯಕರ್ತ ನಾರಾಯಣನ್ ನಟರಾಜನ್ ಅವರ ಪ್ರಕಾರ, ಎರಡು ತಿಂಗಳ ಹಿಂದೆಯಷ್ಟೇ ಸುಪ್ರೀಂ ಕೋರ್ಟ್, ಸ್ಕಾಲರ್ ಷಿಪ್ ಗೆ ಆಧಾರ್ ಸಂಖ್ಯೆ ಕಡ್ಡಾಯ ಎಂಬ ಸರ್ಕಾರದ ಅಧಿಸೂಚನೆಯನ್ನು ತಳ್ಳಿ ಹಾಕಿತ್ತು. ಜನರ ಖಾಸಗಿತನದ ಮೂಲಭೂತ ಹಕ್ಕುಗಳನ್ನು ಆಧಾರ್ ಉಲ್ಲಂಘಿಸುತ್ತದೆ ಎಂಬ ಬಗ್ಗೆ ಸಲ್ಲಿಸಲಾದ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos