ದೇಶ

ಪಿಒಕೆಯಲ್ಲಿರುವ ಜನರಿಗೆ ಭಾರತ ಮತ್ತಷ್ಟು ಬೆಂಬಲವನ್ನು ಹೆಚ್ಚಿಸಬೇಕು: ಶಿವಸೇನೆ

Manjula VN

ಮುಂಬೈ: ಪಾಕಿಸ್ತಾನ ಆಕ್ರಮಿತ ಕಾಶ್ಮೀರಲ್ಲಿರುವ ಜನತೆಗೆ ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರ ಸಂಪೂರ್ಣ ಬೆಂಬಲವನ್ನು ನೀಡಬೇಕಿದೆ ಎಂದು ಶಿವಸೇನೆ ಗುರುವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಜನತೆ ಬಹಳ ಸಂತೋಷವಾಗಿದ್ದಾರೆಂದು ಪಾಕಿಸ್ತಾನ ಸರ್ಕಾರ ಹೇಳುತ್ತಿದೆ. ಪ್ರತೀ ಬಾರಿ ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆಗೆ ಹೊತ್ತು ತರುವ ಪಾಕಿಸ್ತಾನ ಇದೇ ರೀತಿಯ ಸುಳ್ಳು ಮಾಹಿತಿಗಳನ್ನು ಹೇಳುತ್ತಿರುತ್ತೆ. ಆದರೆ, ಪಿಒಕೆಯಲ್ಲಿನ ವಾಸ್ತುಸ್ಥಿತಿಯೇ ಬೇರೆ ಇದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಜನತೆ ಪಾಕಿಸ್ತಾನದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದೆ. ಪಾಕಿಸ್ತಾನ ಮಾಡುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಪಿಒಕೆಯಲ್ಲಿರುವ ಜನತೆ ಸಿಡಿದೆದ್ದಿದೆ. ಬೀದಿಗಿಳಿದು ಅಲ್ಲಿನ ಜನತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಪಿಒಕೆಯಲ್ಲಿರುವ ಜನರ ಪ್ರತಿಭಟನೆಯಿಂದ ವಿಶ್ವದ ಮುಂದೆ ಪಾಕಿಸ್ತಾನ ಮುಖವಾಡ ಕಳಚಿ ಬಿದ್ದಿದೆ. ಇದೊಂದು ಭಾರತ ರಾಜತಂತ್ರದ ದೊಡ್ಡ ಗೆಲವುವಾಗಿದೆ. ಹೀಗಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಜನತೆಗೆ ಭಾರತೀಯ ಸರ್ಕಾರ ತನ್ನ ಬೆಂಬಲವನ್ನು ಮತ್ತಷ್ಟು ಹೆಚ್ಚಿಸಬೇಕಿದೆ ಎಂದು ಹೇಳಿದ್ದಾರೆ.

SCROLL FOR NEXT