ಮಹಾರಾಷ್ಟ್ರ ಸರ್ಕಾರದ ಸಚಿವೆ ಪಂಕಜ ಮುಂಡೆ (ಸಂಗ್ರಹ ಚಿತ್ರ)
ಮುಂಬೈ: ಮಹಾರಾಷ್ಟ್ರ ಸರ್ಕಾರದ ಸಚಿವೆ ಪಂಕಜಾ ಮುಂಡೆ ಹೊಸದೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.
ದಸರಾ ಹಬ್ಬದ ಸಂದರ್ಭದಲ್ಲಿ ಭಾಷಣ ಮಾಡಲು ಅವಕಾಶ ನೀಡಬೇಕೆಂದು ಅಹ್ಮದ್ ನಗರ್ ಜಿಲ್ಲೆಯಲ್ಲಿರುವ ಭಗವಂಗದ್ ಬೆಟ್ಟದ ದೇವಾಲಯದ ಅರ್ಚಕರಿಗೆ ಬೆದರಿಕೆ ಹಾಕುವ ಆಡಿಯೋ ಕ್ಲಿಪ್ ಸಿಕ್ಕಿದ್ದು ಅದು ವಿವಾದಕ್ಕೆ ಕಾರಣವಾಗಿದೆ.
ತಮ್ಮನ್ನು ವಿರೋಧಿಸಿ ಅರ್ಚಕ ನಾಮದೇವ ಶಾಸ್ತ್ರಿ ಮಹಾರಾಜ್ ಅವರನ್ನು ಬೆಂಬಲಿಸುವವರ ವಿರುದ್ಧ ಪಾರ್ಲಿಯಲ್ಲಿ ತಪ್ಪು ಕೇಸು ದಾಖಲು ಮಾಡಲಾಗುವುದು ಎಂದು ಪರಿಶೀಲಿಸದ ಆಡಿಯೋದಲ್ಲಿ ಅವರು ಬೆದರಿಕೆಯೊಡ್ಡಿರುವುದು ದಾಖಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಕೆಲಸಗಳಿಗಾಗಿ ಮೀಸಲಿಟ್ಟ ಹಣವಾದ 25-15 ಯೋಜನೆಯ ಹಣದಿಂದ ಯಾರನ್ನೂ ಬೇಕಾದರೂ ತಮ್ಮ ಕಡೆಗೆ ಬರಮಾಡಿಕೊಳ್ಳಬಹುದು ಎಂದು ಅವರು ಸಂಭಾಷಣೆಯಲ್ಲಿ ಹೇಳಿದ್ದಾರೆ. ಅಲ್ಲದೆ ಅರ್ಚಕರಿಗೆ ಬೆದರಿಕೆಯೊಡ್ಡಿರುವುದು, ಹಣದಿಂದ ಜನರನ್ನು ತನ್ನತ್ತ ಸೆಳೆದುಕೊಳ್ಳಬಲ್ಲೆ ಎಂದು ಹೇಳಿರುವುದೆಲ್ಲ ದಾಖಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಧನಂಜಯ್ ಮುಂಡೆ, ಇದು ಸಚಿವರಿಂದ ಅಧಿಕಾರ ದುರುಪಯೋಗವಾಗಿದ್ದು ಅವರನ್ನು ಕೂಡಲೇ ಸಚಿವೆ ಸ್ಥಾನದಿಂದ ವಜಾಗೊಳಿಸಬೇಕೆಂದು ಹೇಳಿದ್ದಾರೆ.
''ಪಂಕಜ್ ಮುಂಡೆ ಬೆದರಿಕೆಯೊಡ್ಡಿದ್ದಾರೆ ಎಂದು ಹೇಳಲಾಗುತ್ತಿರುವ ಆಡಿಯೋ ಕ್ಲಿಪ್ ನ್ನು ಗಂಭೀರವಾಗಿ ಪರಿಗಣಿಸಬೇಕು. ಕಾನೂನಿನ ಪಾಲನೆ ಮಾಡಬೇಕಾದವರು ತಮ್ಮ ಅನುಕೂಲಕ್ಕೆ ತಕ್ಕಂತೆ ತೆಗೆದುಕೊಳ್ಳುತ್ತಾರೆ. ಅವರಿಗೆ ಸಚಿವೆ ಸ್ಥಾನದಲ್ಲಿ ಮುಂದುವರಿಯುವ ಅಧಿಕಾರವಿಲ್ಲ.'' ಎಂದು ಹೇಳಿದ್ದಾರೆ.
ಜನರ ಉದ್ಧಾರಕ್ಕಾಗಿ ಇರುವ ಯೋಜನೆಗಳ ಹೆಸರಿನಲ್ಲಿ ಅದರ ಹಣದಿಂದ ಜನರನ್ನು ಖರೀದಿಸಲು ನೋಡುತ್ತಿದ್ದಾರೆ. ಈಗಲಾದರೂ ಮುಖ್ಯಮಂತ್ರಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಧನಂಜಯ್ ಮುಂಡೆ ಒತ್ತಾಯಿಸಿದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಂಕಜಾ ಮುಂಡೆ ಪ್ರತಿಕ್ರಿಯೆಗೆ ಸಿಗಲಿಲ್ಲ. ಈ ವರ್ಷದ ಆರಂಭದಲ್ಲಿ ಬರಗಾಲ ಪೀಡಿತ ಪ್ರದೇಶ ಲಾತೂರ್ ನಲ್ಲಿ ಸೆಲ್ಫಿ ತೆಗೆದು ಸಚಿವೆ ಪಂಕಜ ಮುಂಡೆ ವಿವಾದಕ್ಕೀಡಾಗಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos