ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
ಗೋವಾ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರನ್ನು ರಕ್ತದ ದಲ್ಲಾಳಿ (ಕೂನ್ ಕಿ ದಲಾಲಿ) ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕರೆದಿರುವುದಕ್ಕೆ ತಿರುಗೇಟು ನೀಡಿರುವ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಕಾಂಗ್ರೆಸ್ ಆಡಳಿತದಲ್ಲಿ ಸಬ್ ಮರೀನ್ ಮತ್ತು ಹೆಲಿಕಾಪ್ಟರ್ ಖರೀದಿಸುವ ವೇಳೆ ದಲ್ಲಾಳಿಗಳಿದ್ದರು ಎಂದಿದ್ದಾರೆ.
ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿ ಇಲಾಖೆಗೆ ಬಂದ ನಂತರ ನನಗೆ ಸತ್ಯದ ಅರಿವಾಯಿತು. ಸಬ್ ಮರೀನ್ ಡೀಲ್ ಮತ್ತು ಅಗಸ್ಟಾ ಹೆಲಿಕಾಪ್ಟರ್ ಹಗರಣದಲ್ಲಿ ದಲ್ಲಾಳಿಗಳಿದ್ದದ್ದು ತಿಳಿದು ಬಂದಿತು ಎಂದು ಹೇಳಿದ್ದಾರೆ. ಇದನ್ನೆಲ್ಲಾ ನೋಡಿದ ಮೇಲೆ ದಲ್ಲಾಳಿ ಪದದ ಅರ್ಥ ಗೊತ್ತಾಗಿದ್ದು ಎಂದು ಲೇವಡಿ ಮಾಡಿದರು.
ಸರ್ಜಿಕಲ್ ಸ್ಟ್ರೈಕ್ ನಂತರ ಬಿಜೆಪಿಯನ್ನು ಎಲ್ಲರೂ ನಿಂದಿಸಿದರು, ದಾಳಿಯ ಲಾಭವನ್ನು ನಾವು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದೇವೆ ಎಂದು ವಿರೋಧ ಪಕ್ಷಗಳು ಆರೋಪಿಸಿದರು. ಭಾರತೀಯ ಯೋಧರ ತ್ಯಾಗ, ಬಲಿದಾನ ಮಾಡಿ ರಾಜಕೀಯ ಲಾಭ ಪಡೆಯುವ ಆಸೆ ನಮಗಿಲ್ಲ ಎಂದು ಸ್ಪಷ್ಟಪಡಿಸಿದರು.