ದೇಶ

ಸಮಾಜವಾದಿ ಪಕ್ಷದಲ್ಲಿ ಭಿನ್ನಮತ: ಅಖಿಲೇಶ್ ಯಾದವ್ ನಿಷ್ಠಾವಂತ ಉದಯ್ ವೀರ್ ಸಿಂಗ್ ವಜಾ

Sumana Upadhyaya
ನವದೆಹಲಿ: ಸಮಾಜವಾದಿ ಪಕ್ಷದೊಳಗಿನ ಭಿನ್ನಮತ ಮತ್ತೆ ಭುಗಿಲೇಳುವ ಸಾಧ್ಯತೆಯಿದ್ದು ವಿಧಾನ ಪರಿಷತ್ ಸದಸ್ಯ, ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ನಿಷ್ಠಾವಂತ ಉದಯ್ ವೀರ್ ಸಿಂಗ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ವಜಾಗೊಳಿಸಲಾಗಿದೆ. ಉದಯ್ ವೀರ್ ಸಿಂಗ್ ನಿನ್ನೆ ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿಯ ವಿರುದ್ಧ ಆರೋಪ ಮಾಡಿ ಅವರು ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ರಾಜ್ಯ ವಿಧಾನ ಸಭೆ ಚುನಾವಣೆ ಹೊತ್ತಿನಲ್ಲಿ ಕುಟುಂಬದೊಳಗಿನ ಭಿನ್ನಮತ, ವೈಮನಸ್ಸಿನಿಂದ ಚುನಾವಣೆ ಫಲಿತಾಂಶದಲ್ಲಿ ಪಕ್ಷದ ಮೇಲೆ ಪರಿಣಾಮ ಉಂಟುಮಾಡಬಹುದು ಎಂದು ಪರಿಹಾರ ಕಂಡುಕೊಳ್ಳಲು ಇಂದು ಬೆಳಗ್ಗೆ ಪಕ್ಷದ ಹಿರಿಯ ನಾಯಕರಾದ ಬೆನಿ ಪ್ರಸಾದ್ ವರ್ಮಾ, ನರೇಶ್ ಅಗರ್ ವಾಲ್ ಮತ್ತು ಪಕ್ಷದ ವಕ್ತಾರ ಅಶೋಕ್ ಬಾಜ್ ಪೈ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿದ್ದರು. 
ಬಿಕ್ಕಟ್ಟನ್ನು ಶಮನಗೊಳಿಸಲು ಸೋದರರಾದ ಶಿವಪಾಲ್, ರಾಮ್ ಗೋಪಾಲ್ ಮತ್ತು ಪುತ್ರ ಅಖಿಲೇಶ್ ಯಾದವ್ ಮಧ್ಯೆ ಮಾತುಕತೆ ನಡೆಸುವಂತೆ ಭೇಟಿ ಮಾಡಿದ ನಾಯಕರು ಮನವಿ ಮಾಡಿದ್ದಾರೆ.
''ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ. ಚುನಾವಣೆ ಸಮೀಪದಲ್ಲಿರುವುದರಿಂದ ಸಮಾಜವಾದಿ ಪಕ್ಷದೊಳಗಿನ ಭಿನ್ನಮತವನ್ನು ಇಲ್ಲಿಗೇ ಶಮನಗೊಳಿಸುವಂತೆ ನಾವು ಮುಲಾಯಂ ಸಿಂಗ್ ಅವರನ್ನು ಮನವಿ ಮಾಡಿಕೊಂಡಿದ್ದೇವೆ ಎಂದು ಬೆನಿ ಪ್ರಸಾದ್ ವರ್ಮ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಕ್ಷದೊಳಗಿನ ಜಗಳದ ಬಗ್ಗೆ ಮುಲಾಯಂ ಸಿಂಗ್ ಅವರು ತೀವ್ರ ನೊಂದಿದ್ದಾರೆ. ಅಖಿಲೇಶ್ ಯಾದವ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಬೇಕೆಂದು ಅವರ ಮಲತಾಯಿ ಪಿತೂರಿ ನಡೆಸುತ್ತಿದ್ದಾರೆ ಎಂದು ಉದಯ್ ವೀರ್ ಬರೆದ ಪತ್ರದ ಬಗ್ಗೆ ಅವರು ಬಹಳ ನೊಂದಿದ್ದಾರೆ ಎಂದು ಬೆನಿ ಪ್ರಸಾದ್ ಹೇಳಿದರು.
SCROLL FOR NEXT