ದೇಶ

ಅತ್ಯಾಚಾರ ಪ್ರಕರಣ: ಅಸರಾಂ ಬಾಪು ಮಧ್ಯಂತರ ಜಾಮೀನು ಅರ್ಜಿ ವಜಾ

Lingaraj Badiger
ನವದೆಹಲಿ: ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಅಸರಾಂ ಬಾಪು ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಆರ್ಯುವೇದಿಕ್ ಚಿಕಿತ್ಸೆಗಾಗಿ ಒಂದು ತಿಂಗಳ ಮಧ್ಯಂತರ ಜಾಮೀನು ನೀಡುವಂತೆ ಕೋರಿ ಅಸರಾಂ ಬಾಪು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ.ಸಿಕ್ರಿ ಹಾಗೂ ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನೊಳಗೊಂಡ ಸುಪ್ರೀಂ ಪೀಠ, ಅಸರಾಂ ಬಾಪು ಅವರು ನ್ಯಾಯಾಂಗ ಬಂಧನದಲ್ಲಿದ್ದುಕೊಂಡೆ ಜೋಧಪುರದ ಏಮ್ಸ್ ಅಥವಾ ರಾಜಸ್ಥಾನದ ಆರ್ಯುವೇದಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಹೇಳಿದೆ.
ಒಂದು ವೇಳೆ ನಿಮಗೆ ಆರ್ಯುವೇದಿಕ್ ಚಿಕಿತ್ಸೆಯ ಅಗತ್ಯವಿದ್ದರೆ ಅದನ್ನು ರಾಜಸ್ಥಾನದಲ್ಲಿಯೇ ಪಡೆದುಕೊಳ್ಳಬಹುದು. ಇದಕ್ಕೆ ಮಧ್ಯಂತರ ಜಾಮೀನಿನ ಅಗತ್ಯ ಇಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ ಅವರ ಬೆಂಬಲಿಗರಿಗೆ ಪ್ರವೇಶ ನೀಡದಂತೆ ಮತ್ತು ಯಾರ ಭೇಟಿಗೂ ಅವಕಾಶ ನೀಡದಂತೆ ಸೂಚಿಸಿದೆ.
ಜೋಧಪುರದ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಅಸರಾಂ ಬಾಪು ಅವರನ್ನು ಆಗಸ್ಟ್ 31, 2013ರಲ್ಲಿ ಬಂಧಿಸಲಾಗಿದ್ದು, ಅಂದಿನಿಂದ ಜೈಲಿನಲ್ಲಿದ್ದಾರೆ.
SCROLL FOR NEXT