ನವದೆಹಲಿ: ಟಾಟಾ ಗ್ರೂಪ್ ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಯವರನ್ನು ಪದಚ್ಯುತಗೊಳಿಸಿರುವುದು, ಏರ್ ಏಶಿಯಾ ಇಂಡಿಯಾ ಬಗ್ಗೆ ಅವರು ಬಹಿರಂಗಪಡಿಸಿರುವ ವಿಷಯಗಳ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಯಾವುದಾದರೂ ಕ್ರಮ ತೆಗೆದುಕೊಳ್ಳಬೇಕೆಂದೆನಿಸಿದರೆ ಆ ಕುರಿತು ಗಮನಹರಿಸಲಾಗುವುದು ಎಂದು ಹೇಳಿದೆ.
ಯಾವುದೇ ಕಡೆಯಿಂದ ಯಾವುದಾದರೂ ಮಾಹಿತಿ ಸಿಗಲು ನಾವು ಕಾಯುತ್ತಿದ್ದೇವೆ ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ಆರ್ಎನ್ ಚೌಬೆ ತಿಳಿಸಿದ್ದಾರೆ.
ಏರ್ ಏಷಿಯಾ ಜೊತೆಗೆ ಟಾಟಾ ಗ್ರೂಪ್ ನ ವಿಮಾನಯಾನ ಜಂಟಿ ಕಾರ್ಯದ ನೈತಿಕತೆಯನ್ನು ಪ್ರಶ್ನಿಸಿರುವ ಮಿಸ್ತ್ರಿ ವಿಧಿವಿಜ್ಞಾನ ತನಿಖೆಯ ಪ್ರಕಾರ ಭಾರತ ಮತ್ತು ಸಿಂಗಪುರದಲ್ಲಿ ಅಸ್ತಿತ್ವದಲ್ಲಿರದ ಘಟಕಗಳಲ್ಲಿ 22 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ಯಾರಾದರೂ ಸಚಿವಾಲಯದ ಗಮನಕ್ಕೆ ಅಕ್ರಮ ವ್ಯವಹಾರವನ್ನು ತಂದರೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಟಾಟಾ ಗ್ರೂಪ್ ಅಧ್ಯಕ್ಷ ಸ್ಥಾನದಿಂದ ಮಿಸ್ತ್ರಿಯವರನ್ನು ಇದ್ದಕ್ಕಿದ್ದಂತೆ ಮೊನ್ನೆ ಸೋಮವಾರ ತೆಗೆದುಹಾಕಿ ಅವರ ಸ್ಥಾನಕ್ಕೆ ಅವರ ಹಿಂದಿನ ಅಧಿಕಾರಿ ರತನ್ ಟಾಟಾ ಅವರನ್ನು ಮುಂದಿನ ನಾಲ್ಕು ತಿಂಗಳ ಅವಧಿಗೆ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.