ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ
ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದ ಸಮಸ್ಯೆಗಳನ್ನು ಬಗೆಹರಿಸಲು ಸರ್ವಪಕ್ಷ ನಿಯೋಗದ ವಿಶ್ವಾಸಾರ್ಹ ಮತ್ತು ಅರ್ಥಪೂರ್ಣ ರಾಜಕೀಯ ಮಾತುಕತೆಗೆ ಹುರ್ರಿಯತ್ ಕಾನ್ಫರೆನ್ಸ್ ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಜನರನ್ನು ಸೇರಿಸಲು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕರೆ ನೀಡಿದ್ದಾರೆ.
ದೇಶದ ರಾಜಕೀಯ ಮುಖಂಡರು ವಿಳಂಬ ಮಾಡದೆ ಸಮಾಜದ ಎಲ್ಲಾ ವರ್ಗಗಳ ಜನರನ್ನು ಫಲದಾಯಕ ಮಾತುಕತೆಗೆ ಆಹ್ವಾನಿಸಬೇಕು ಮತ್ತು ಜಮ್ಮು-ಕಾಶ್ಮೀರ ವಿಷಯದಲ್ಲಿ ಶಾಂತಿ ಸ್ಥಾಪಿಸುವುದನ್ನು ಕನಸಾಗದೆ ವಾಸ್ತವಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದು ಹೇಳಿದ್ದಾರೆ.
ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾದ ವ್ಯಕ್ತಿಯ ಕುಟುಂಬದವರನ್ನು ಭೇಟಿ ಮಾಡಿ ಮಾತನಾಡಿದ ಅವರು, ಮಶೂಕ್ ಅಹ್ಮದ್ ಎಂಬುವವರ ಮನೆಗೆ ಅವರ ಕುಟುಂಬದವರಿಗೆ ಸಾಂತ್ವನ ಹೇಳಲು ಭೇಟಿ ನೀಡಿದ್ದೆ. ಕಾಶ್ಮೀರದಲ್ಲಿ ಇದುವರೆಗೆ ನಡೆದ ಪ್ರತಿಭಟನೆ, ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡದ್ದು ಒಂದು ದೊಡ್ಡ ದುರಂತ. ಇಂದು ಕಾಶ್ಮೀರದ ಪ್ರತಿಯೊಬ್ಬರಿಗೂ ಶಾಂತಿ ಬೇಕಾಗಿದೆ ಎಂದು ಮೆಹಬೂಬ ಮುಫ್ತಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.