ಶ್ರೀನಗರ: ಸರ್ವಪಕ್ಷನಿಯೋಗದೊಂದಿಗೆ ಮಾತುಕತೆ ನಡೆಸುವ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆಹ್ವಾನವನ್ನು ಪ್ರತ್ಯೇಕತಾವಾದಿ ನಾಯಕರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
ಸರ್ವಪಕ್ಷ ನಿಯೋಗವನ್ನು ಭೇಟಿ ಮಾಡುವುದರ ಬಗ್ಗೆ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಪ್ರತ್ಯೇಕತಾವಾದಿಗಳು, ದೆಹಲಿಯಿಂದ ಬಂದಿರುವ ನಿಯೋಗ ಅದರ ಅಭಿಪ್ರಾಯದ ಬಗ್ಗೆ ಒಂದೇ ಒಂದು ಮಾತನ್ನೂ ಬಹಿರಂಗಪಡಿಸಿಲ್ಲ. ಅಲ್ಲದೇ ಭೇಟಿಯ ಕಾರ್ಯಸೂಚಿಯನ್ನು ಸ್ಪಷ್ಟಪಡಿಸಿಲ್ಲ ಎಂದು ಹೇಳಿದೆ.
ಹೇಳಿಕೆಯಲ್ಲಿ ಮೆಹಬೂಬಾ ಮುಫ್ತಿ ಅವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರತ್ಯೇಕತಾವಾದಿಗಳು, ಮೆಹಬೂಬಾ ಮುಫ್ತಿ ಅವರು ಪ್ರತ್ಯೇಕತಾವಾದಿಗಳನ್ನು ಮಾತುಕತೆಗೆ ಆಹ್ವಾನಿಸಿರುವುದು ಕೇವಲ ಪಿಡಿಪಿ ನಾಯಕಿಯಾಗಿಯಷ್ಟೇ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಅಲ್ಲ ಎಂದು ಹೇಳಿದ್ದಾರೆ. ಉದ್ವಿಗ್ನ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗಾಗಿ ರಾಜನಾಥ್ ಸಿಂಗ್ ನೇತೃತ್ವದ ಸರ್ವಪಕ್ಷ ನಿಯೋಗ ಕಾಶ್ಮೀರದ ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸಲು ಕಾಶ್ಮೀರಕ್ಕೆ ತೆರಳಿದ್ದು, ಪ್ರತ್ಯೇಕತಾವಾದಿಗಳನ್ನೂ ಒಳಗೊಂಡ ಮಾತುಕತೆ ನಡೆಸಬೇಕೆಂದು ಮೆಹಬೂಬಾ ಮುಫ್ತಿ ಹೇಳಿದ್ದರು.