ಚೆನ್ನೈ: ಬ್ರೆಝಿಲ್ ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ನಲ್ಲಿ ಹೈ ಜಂಪ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಟಿ.ಮರಿಯಪ್ಪನ್ ಗೆ ತಮಿಳು ನಾಡು ಮುಖ್ಯಮಂತ್ರಿ ಜೆ.ಜಯಲಲಿತಾ 2 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.
ತಮಿಳು ನಾಡು ಜನತೆ ಪರವಾಗಿ ಮರಿಯಪ್ಪನ್ ಗೆ ಬರೆದ ಪತ್ರದಲ್ಲಿ ಅಭಿನಂದನೆ ಹೇಳಿದ ಅವರು, ನಿಮ್ಮ ಸಾಧನೆಯಿಂದ ನಾನು ಬಹಳ ಸಂತೋಷಗೊಂಡಿದ್ದೇನೆ ಎಂದು ಹೇಳಿದ್ದಾರೆ.
''ಪ್ಯಾರಾಲಿಂಪಿಕ್ ನ ಹೈ ಜಂಪ್ ವಿಭಾಗದಲ್ಲಿ ಭಾರತೀಯರೊಬ್ಬರು ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲು. 1.89 ಮೀಟರ್ ಎತ್ತರ ನೆಗೆಯುವ ಮೂಲಕ ನೀವು ಇತಿಹಾಸ ನಿರ್ಮಿಸಿ ದೇಶ ತಮಿಳು ನಾಡು ರಾಜ್ಯ ಹೆಮ್ಮೆಪಡುವಂತ ಕೆಲಸ ಮಾಡಿದ್ದೀರಿ. ಅನೇಕ ಅಡೆತಡೆಗಳನ್ನು ನಿವಾರಿಸಿ ನೀವು ಸಾಧನೆ ಮಾಡಿದ್ದೀರಿ. ನಿಮ್ಮ ಈ ಸಾಧನೆ ಅನೇಕ ಮಕ್ಕಳಿಗೆ ಮತ್ತು ಯುವಕ, ಯುವತಿಯರಿಗೆ ಸ್ಪೂರ್ತಿ ನೀಡಲಿದೆ'' ಎಂದು ಹೇಳಿದ್ದಾರೆ.
ಮರಿಯಪ್ಪನ್ ಇಂದು ಇಡೀ ದೇಶ ಹೆಮ್ಮೆಪಡುವಂಥ ಸಾಧನೆ ಮಾಡಲು ಅವರಿಗೆ ಸಹಾಯ ಮಾಡಿದವರಿಗೂ ಮುಖ್ಯಮಂತ್ರಿ ಜಯಲಲಿತಾ ಇದೇ ಸಂದರ್ಭದಲ್ಲಿ ಅಭಿನಂದನೆ ಹೇಳಿದರು.ತಮ್ಮ ಎಲ್ಲಾ ಅಡ್ಡಿ, ಆತಂಕಗಳನ್ನು ಮೀರಿ ಸಾಧನೆ ಮಾಡಲು ತುಡಿಯುತ್ತಿರುವವರಿಗೆ ನೀವು ಮಾದರಿಯಾಗಲಿದ್ದೀರಿ ಎಂದು ಜಯಲಲಿತಾ ಪತ್ರದಲ್ಲಿ ಹೇಳಿದ್ದಾರೆ.