ಹೈದರಾಬಾದ್: ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಹೈದರಾಬಾದ್ ನ ಕೇಂದ್ರೀಯ ವಿಶ್ವವಿದ್ಯಾಲಯದ ಮತ್ತೊಬ್ಬ ವಿದ್ಯಾರ್ಥಿ ಶನಿವಾರ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ ಪ್ರವೀಣ್ ನಳ್ಳಿ ಎಂದು ಗುರುತಿಸಲಾಗಿದ್ದು, ಮೊದಲ ವರ್ಷದ ಸ್ನಾತಕೋತ್ತರ ಚಿತ್ರಕಲಾ ಪದವಿ ಮಾಡುತ್ತಿದ್ದ.
ಪೆಂಟಿಂಗ್ ಸ್ಟುಡಿಯೋ ತೆರಳಿದ್ದ ಪ್ರವೀಣ್ ರೂಮೆಟ್ ಇಂದು ಬೆಳಗ್ಗೆ 4 ಗಂಟೆಯ ಸುಮಾರಿಗೆ ಹಾಸ್ಟೆಲ್ ಗೆ ಬಂದು ಕದ ತಟ್ಟಿದ್ದಾನೆ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಇಂಡಿನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಕಳೆದ ಜುಲೈನಲ್ಲಿ ಕೇಂದ್ರೀಯ ವಿವಿ ಸೇರಿಕೊಂಡಿದ್ದ ಪ್ರವೀಣ್ ತನ್ನ ಹಾಸ್ಟೆಲ್ನ 204ನೇ ನಂಬರಿನ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಪ್ರವೀಣ್ ಆತ್ಮಹತ್ಯೆಗೆ ಕಾರಣ ಇನ್ನೂ ಗೊತ್ತಾಗಿಲ್ಲ ಎಂದು ಹೇಳಿದ್ದಾರೆ.
ಪ್ರವೀಣ್ ತೆಲಂಗಾಣದ ಮೆಹಬೂಬ್ನಗರದ ಶಾದ್ನಗರದ ನಿವಾಸಿಯಾಗಿದ್ದು, ಆತನ ತಂದೆ ಬಿಎಸ್ಎನ್ಎಲ್ ಉದ್ಯೋಗಿಯಾಗಿದ್ದಾರೆ.
ಪ್ರವೀಣ್ ಜತೆಗೆ ಈಗ ಮೂರು ದಿನಗಳ ಹಿಂದಷ್ಟೇ ತಾವು ಮಾತನಾಡಿರುವುದಾಗಿ ಆತನ ಸಹೋದರ ತಿಳಿಸಿದ್ದಾರೆ.