ನವದೆಹಲಿ: ಸೊಮಾಲಿಯಾದ ಕಡಲ್ಗಳ್ಳರು 11 ಸಿಬ್ಬಂದಿ ಮತ್ತು ಅಪಾರ ಪ್ರಮಾಣದ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದ ಭಾರತದ ಸರಕು ಸಾಗಣೆ ಹಡಗನ್ನು ಅಪಹರಿಸಿದ್ದಾರೆ ಎಂದು ಸೋಮವಾರ ಹಡಗು ನಿರ್ದೇಶನಾಲಯ ತಿಳಿಸಿದೆ.
ನಿನ್ನೆ ದುಬೈನಿಂದ ಯೆಮೆನ್ನ ಅಲ್ ಮುಕಾಲಾ ಬಂದರಿಗೆ ತೆರಳುತ್ತಿದ್ದ ‘ಅಲ್ ಕೌಶರ್’ ಎಂಬ ಹಡಗನ್ನು ಅಪಹರಿಸಲಾಗಿದ್ದು, ಅಪಹರಣಕ್ಕೆ ಸಂಬಂಧಿಸಿದಂತೆ ಹಡಗಿನ ಕ್ಯಾಪ್ಟನ್ ದುಬೈನಲ್ಲಿರುವ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಹಡಗು ನಿರ್ದೇಶನಾಲಯದ ಮಲಿನ್ ಶಂಕರ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅಪಹರಣವಾಗಿರುವ ಹಡಗಿನಲ್ಲಿ 11 ಸಿಬ್ಬಂದಿಗಳಿದ್ದು, ಅವರ ಬಿಡುಗಡೆಗೆ ಕಡಲ್ಗಳ್ಳರು ಇದುವರೆಗೂ ಯಾವುದೇ ಬಿಡಿಕೆ ಇಟ್ಟಿಲ್ಲ ಎಂದು ಮಲಿನ್ ಶಂಕರ್ ಅವರು ಹೇಳಿದ್ದಾರೆ.
ಅಪಹರಣವಾಗಿರುವ ಹಡಗಿನಲ್ಲಿದ್ದ ಸಿಬ್ಬಂದಿ ಮುಂಬೈನ ಮಾಂಡವಿಯ ನಿವಾಸಿಗಳು ಎಂದು ತಿಳಿದು ಬಂದಿದೆ. ಹಡಗನ್ನು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಯತ್ನ ಪ್ರಾರಂಭಿಸಿದೆ. ಜತೆಗೆ ಭಾರತೀಯ ಹಡಗುಗಳು ಅಪಹರಣವಾಗದಂತೆ ತಡೆಯಲು ನೌಕಾಪಡೆ, ಕರಾವಳಿ ರಕ್ಷಣಾ ಪಡೆಗಳು ಕಾರ್ಯಪ್ರವೃತ್ತರಾಗಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ವರದಿಯಾಗಿದೆ.