ನವದೆಹಲಿ: ತ್ರಿವಳಿ ತಲಾಖ್ ಕುರಿತಂತೆ ನಿನ್ನೆಯಷ್ಟೇ ಮೌಲ್ವಿಗಳ ವಿರುದ್ಧ ಕಿಡಿಕಾರಿದ್ದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಪತ್ನಿ ಸಲ್ಮಾ ಅನ್ಸಾರಿಯವರ ಬೆನ್ನಿಗೆ ಬಿಜೆಪಿ ನಾಯಕ ಆರ್.ಕೆ. ಸಿಂಗ್ ಅವರು ಸೋಮವಾರ ನಿಂತಿದ್ದಾರೆ.
ಸಲ್ಮಾ ಅನ್ಸಾರಿಯವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಇಸ್ಲಾಂ ಧರ್ಮದಲ್ಲಿ ವಿಚ್ಛೇದನವೆಂಬ ಪದ್ಧತಿಯ ಭಾಗವೇ ಇಲ್ಲ. ಸಲ್ಮಾ ಅನ್ಸಾರಿಯವರ ಹೇಳಿಕೆ ಸರಿಯಾಗಿದೆ. ತ್ರಿವಳಿ ತಲಾಖ್ ಎಂಬ ಪದ್ಧತಿ ಪಾಕಿಸ್ತಾನದಲ್ಲಿಯೇ ಚಾಲ್ತಿಯಲ್ಲಿ ಇಲ್ಲ. ಇಲ್ಲಿರುವ ಕೆಲವು ಜನರು ಮಾತ್ರ ಇಂತಹ ನಿಯಮಗಳನ್ನು ಮುಸ್ಲಿಂ ಮಹಿಳೆಯರ ಮೇಲೆ ಹೇರುತ್ತಿದ್ದಾರೆ. ತ್ರಿವಳಿ ತಲಾಖ್ ಕೈಬಿಡಲು ವಿರೋಧಿಸುತ್ತಿದ್ದಾರೆಂದು ಹೇಳಿದ್ದಾರೆ.
ತ್ರಿವಳಿ ತಲಾಖ್ ಎಂಬ ಪದ್ಧತಿಯೇ ಇಲ್ಲ ಎಂದಾದ ಮೇಲೆ ಅದಕ್ಕೆ ಬೆಂಬಲ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ. ಪ್ರತೀಯೊಂದು ಕ್ಷೇತ್ರದಲ್ಲಿ ಬದಲಾವಣೆಯೆಂಬುದು ಇದ್ದೇ ಇರುತ್ತದೆ. ಇದೂ ಕೂಡ ಅಗತ್ಯಕರವಾದ ಸುಧಾರಣೆಯಾಗಿದೆ. ತ್ರಿವಳಿ ತಲಾಖ್ ಎಂಬುದು ಧರ್ಮದ ಭಾಗವಲ್ಲ. ದೇವರೂ ಕೂಡ ಹೇಳಿಲ್ಲ. ನಿಮ್ಮ ಪತ್ನಿಯೊಂದಿಗೆ ನೀವು ಹೇಗೆ ನಡೆದುಕೊಳ್ಳುತ್ತೀರಾ ಎಂಬುದರ ಮೇಲೆ ನಿಂತಿರುತ್ತದೆ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ತ್ರಿವಳಿ ತಲಾಖ್ ವಿವಾದ ಕುರಿತಂತೆ ಹೇಳಿಕೆ ನೀಡಿದ್ದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಪತ್ನಿ ಸಲ್ಮಾ ಅನ್ಸಾರಿಯವರು, ತ್ರಿವಳಿ ತಲಾಖ್ ಎಂಬ ನಿಯಮ ಕುರಾನ್ ನಲ್ಲಿ ಇಲ್ಲ, ಮುಸ್ಲಿಂ ಮಹಿಳೆಯರು ಮೌಲಾನಾಗಳು ಹಾಗೂ ಮೌಲ್ವಿಗಳ ಮಾತು ಕೇಳುವುದನ್ನು ನಿಲ್ಲಿಸಬೇಕು. ಮೌಲ್ವಿಗಳ ಮಾತುಗಳನ್ನು ಕೇಳುವ ಬದಲು ಮುಸ್ಲಿಂ ಮಹಿಳೆಯಲು ತಾವೇ ಸ್ವತಃ ಕುರಾನ್ ನ್ನು ಓದಿ ತಿಳಿಯಬೇಕಿದೆ ಎಂದು ಹೇಳಿದ್ದರು.