ದೇಶ

ಇವಿಎಂ ಗೋಲ್'ಮಾಲ್ ಪ್ರಕರಣ: ರಾಷ್ಟ್ರಪತಿ ಮೊರೆ ಹೋದ ವಿರೋಧ ಪಕ್ಷಗಳು

Manjula VN
ನವದೆಹಲಿ: ಪಂಚರಾಜ್ಯ ಚುನಾವಣೆ ವೇಳೆ ಇವಿಎಂ (ವಿದ್ಯುನ್ಮಾನ ಮತ ಯಂತ್ರ)ನಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳು ಇದೀಗ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಮೊರೆ ಹೋಗಿದ್ದಾರೆ. 
ನಿನ್ನೆಯಷ್ಟೇ ಸಂಸತ್ತಿನ ಅಧಿವೇಶನ ಅಂತ್ಯಗೊಂಡಿದ್ದು, ಅಧಿವೇಶನ ಆರಂಭವಾದ ದಿನದಿಂದಲೂ ವಿರೋಧ ಪಕ್ಷಗಳಿ ಇವಿಎಂ ತಿರುಚಲಾಗಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಹಲವಾರು ಪ್ರತಿಭಟನೆಗಳನ್ನು ನಡೆಸಿದ್ದವು. 
ಕಲಾಪ ಅಂತ್ಯಗೊಂಡ ಬಳಿಕ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮ್ತತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹಲವಾರು ನಾಯಕರು ಸಭೆ ನಡೆಸಿ ಇವಿಎಂ ಗೋಲ್ ಮಾಲ್ ಕುರಿತಂತೆ ಮಾತುಕತೆ ನಡೆಸಿದರು.
ಇವಿಎಂ (ವಿದ್ಯುನ್ಮಾನ ಮತಯಂತ್ರ) ಬಳಕೆ ಬದಲು ಚುನಾವಣೆ ವೇಳೆ ಬ್ಯಾಲೆಟ್ ಪೇಪರ್ ಗಳನ್ನೇ ಬಳಕೆ ಮಾಡುವಂತೆ ಕೋರಿ ವಿರೋಧ ಪಕ್ಷ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ತೃಣಮೂಲ ಕಾಂಗ್ರೆಸ್ ಪಕ್ಷ ಹಾಗೂ ಡಿಎಂಕೆ ಪಕ್ಷಗಳು ರಾಷ್ಟ್ರಪತಿಗಳನ್ನು ಭೇಟಿ ಮಾಡಿ, ಮನವಿ ಹಾಗೂ ದೂರನ್ನು ಸಲ್ಲಿಸಿದರು. 
ಪಂಚರಾಜ್ಯಗಳ ಚುನಾವಣೆ ಪೈಕಿ ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದಿತ್ತು. ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಇವಿಎಂಗಳ ಮೇಲೆ ಬಿಎಸ್ ಪಿ ನಾಯಕಿ ಮಾಯಾವತಿಯವರು ಅನುಮಾನ ವ್ಯಕ್ತಪಡಿಸಿದ್ದರು. 
ಮಧ್ಯಪ್ರದೇಶದ ಉಪಚುನಾವಣೆ ವೇಳೆ ಮಾಧ್ಯಮ ಮತ್ತು ರಾಜಕೀಯ ಪಕ್ಷಗಳ ಮುಖಂಡರಿಗೆ ಪ್ರಾತ್ಯಕ್ಷಿಕೆ ನೀಡುವಾಗ ಯಾವುದೇ ಪಕ್ಷಕ್ಕೆ ಮತ ಹಾಕಿದರೂ ಬಿಜೆಪಿಗೆ ಕೆಂಪು ದೀಪ ಹೊತ್ತುಕೊಳ್ಳುತ್ತಿರುವುದು ಕಂಡುಬಂದಿತ್ತು. ಇದಾದ ಬಳಿಕ ಆಮ್ ಆದ್ಮಿ ಪಕ್ಷ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಮುಂದಿನ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಬಳಸಿ ನಡೆಸುವಂತೆ ಒತ್ತಾಯಿಸಿದ್ದವು. ಈ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಕೆ ಮಾಡಿದ್ದವು. 
ಆರೋಪ ಸಂಬಂಧ ಸ್ಪಷ್ಟನೆ ನೀಡಿದ್ದ ಚುನಾವಣಾ ಆಯೋಗ, ಇವಿಎಂಗಳನ್ನು ತಿರುಚಲಾಗಿಲ್ಲ ಮತ್ತು ಸ್ವತಃ ಅವುಗಳ ಉತ್ಪಾದಕರಿಂದಲೂ ಕೂಡ ಅವುಗಳನ್ನು ತಿರುಚಲು ಸಾಧ್ಯವಾಗುವುದಿಲ್ಲ ಎಂದು ಹೇಳಿತ್ತು. ಈ ಹಿನ್ನಲೆಯಲ್ಲಿ ರಾಷ್ಟ್ರಪತಿಯವರನ್ನು ಭೇಟಿ ಮಾಡಿದ ವಿರೋಧಪಕ್ಷಗಳು ದೂರು ಸಲ್ಲಿಕೆ ಮಾಡಿವೆ. 
SCROLL FOR NEXT