ನವದೆಹಲಿ: ಕರ್ತವ್ಯನಿರತ ಸಿಆರ್'ಪಿಎಫ್ ಯೋಧನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ಆಕ್ರೋಶಭರಿತ ಹಾಗೂ ಒಗ್ಗಟ್ಟಿನ ಕುರಿತ ಹೇಳಿಕೆಗೆ ಕಾಶ್ಮೀರ ಹೋರಾಟಗಾರರು 'ಸೆಲ್ಯೂಟ್' ಹೊಡೆದಿದ್ದಾರೆ.
ಶ್ರೀನಗರ ಲೋಕಸಭೆ ಚುನಾವಣೆ ನಂತರ ವಾಪಸ್ ಹೋಗುವ ಸಂದರ್ಭದಲ್ಲಿ ಕೆಲ ಕಾಶ್ಮೀರಿ ಯುವಕರು ಸಿಆರ್'ಪಿಎಫ್ ಯೋಧನ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
ವಿಡಿಯೋ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಗೌತಮ್ ಗಂಭೀರ್ ಅವರು, ನಮ್ಮ ದೇಶದ ಸೈನಿಕನಿಗೆ ಬಿದ್ದ ಒಂದೊಂದು ಏಟಿಗೆ ಪ್ರತಿಯಾಗಿ ಕನಿಷ್ಠ 100 ಜಿಹಾದಿಗಳ ಪ್ರಾಣ ಹೋಗಬೇಕು, ಯಾರಿಗೆಲ್ಲಾ ಸ್ವಾತಂತ್ರ್ಯ ಬೇಕೋ ಅವರೆಲ್ಲಾ ಈ ಕೂಡಲೇ ಕಾಶ್ಮೀರ ಬಿಟ್ಟು ಹೊರಡಿ, ಕಾಶ್ಮೀರ ನಮಗೆ ಸೇರಿದ್ದು. ನಮ್ಮ ರಾಷ್ಟ್ರ ಧ್ವಜದಲ್ಲಿ ಮೂರು ಬಣ್ಣಗಳಿದ್ದು, ಕೇಸರಿ- ನಮ್ಮ ಆಕ್ರೋಶದ ಬೆಂಕಿ, ಬಿಳಿಬಣ್ಣ- ಜಿಹಾದಿಗಳ ಹೆಣದ ಮೇಲೆ ಹೊದಿಸುವ ಹೊದಿಕೆ, ಹಸಿರು ಬಣ್ಣ ಭಯೋತ್ಪಾದಕತೆಯನ್ನು ವಿರೋಧಿಸುತ್ತದೆ ಎಂಬುದನ್ನೂ ಸೂಚಿಸುತ್ತದೆ. ಭಾರತ ವಿರೋಧಿಗಳು ನಮ್ಮ ದೇಶದ ಭಾವುಟದ ಬಣ್ಣವನ್ನು ಮರೆತಿದ್ದಾರೆ ಎನಿಸುತ್ತದೆ ಎಂದು ಹೇಳಿದ್ದರು.
ಈ ಹೇಳಿಕೆಯನ್ನು ಕಾಶ್ಮೀರ ಹೋರಾಟಗಾರ ಸುಶೀಲ್ ಪಂಡಿತ್ ಅವರು ಪ್ರಶಂಸಿಸಿದ್ದು, ಗಂಭೀರ್ ಅವರಂತೆಯೇ ದೇಶದ ಜನತೆ ಐಕಮತ್ಯವನ್ನು ಪ್ರದರ್ಶಿಸಬೇಕು. ದೇಶಕ್ಕಾಗಿ ಗಣ್ಯಾತಿಗಣ್ಯರು ಎದ್ದುನಿಲ್ಲಬೇಕು ಎಂದು ಹೇಳಿದ್ದಾರೆ.
ಗೌತಮ್ ಗಂಭೀರ್ ಅವರ ಹೇಳಿಕೆಗೆ ನಾನು ಸೆಲ್ಯೂಟ್ ಹೊಡೆಯುತ್ತೇನೆ. ಭಾರತೀಯ ಸಂಪ್ರಾದಾಯವನ್ನು ಪ್ರದರ್ಶಿಸಿದ್ದಾರೆ. ಭಾರತಕ್ಕಾಗಿ ಸೇವೆ ಸಲ್ಲಿಸುತ್ತಿರುವವರು ಹೊರಗೆ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತ ಮತ್ತು ಕಾಶ್ಮೀರಕ್ಕಾಗಿ ಹೋರಾಟ ನಡೆಸುತ್ತಿರುವ ಯೋಧರಿಗೆ ಭಾರತದಲ್ಲಿರುವ ಪ್ರತೀಯೊಬ್ಬ ಭಾರತೀಯನೂ ಬೆಂಬಲ ವ್ಯಕ್ತಪಡಿಸಬೇಕು ಎಂದು ತಿಳಿಸಿದ್ದಾರೆ.