ಭೋಪಾಲ್: ಮೂರು ವರ್ಷಗಳ ಹಿಂದೆ ಕರುವೊಂದನ್ನು ಕೊಂದಿದ್ದಕ್ಕಾಗಿ ಶಿಕ್ಷೆಯಾಗಿ ಕೊಂದವನ 7 ವರ್ಷದ ಬಾಲಕಿಯನ್ನು 8 ವರ್ಷದ ಬಾಲಕನೊಂದಿಗೆ ಮದುವೆ ಮಾಡಲು ಆದೇಶ ನೀಡಿದ ಘಟನೆ ನಡೆದಿದೆ.
ಮೂರು ವರ್ಷಗಳ ಹಿಂದೆ ನಡೆದ ಘಟನೆಗೆ ಜಗದೀಶ್ ಬಂಜಾರ ಎಂಬ ಬಾಲಕನಿಗೆ ಈಗಾಗಲೇ ಶಿಕ್ಷೆಯಾಗಿದೆ. ಅಂದು ಅಲಹಾಬಾದ್ ನ ಗಂಗಾ ನದಿಯಲ್ಲಿ ಸ್ನಾನ ಮಾಡಿ ತನ್ನ ಗ್ರಾಮವಾದ ಭೋಪಾಲ್ ನಿಂದ 225 ಕಿಲೋ ಮೀಟರ್ ದೂರದಲ್ಲಿ ತರ್ಪುರ್ ಗ್ರಾಮದಲ್ಲಿ ಇಡೀ ಸಮುದಾಯಕ್ಕೆ ಸಸ್ಯಾಹಾರ ಊಟವನ್ನು ನೀಡುವಂತೆ ಪಂಚಾಯ್ತಿ ಮುಖ್ಯಸ್ಥ ಆದೇಶ ನೀಡಿದ್ದರು. ಅಲ್ಲದೆ ಜಗದೀಶ್ ಬಂಜಾರ, ಆತನ ಪತ್ನಿ ಗೀತಾ ಬಾಯಿ ಮತ್ತು ಪುತ್ರಿ ಪೂಲ್ ಬಾಯಿಯನ್ನು ಗ್ರಾಮದಿಂದ ಬಹಿಷ್ಕರಿಸಲಾಗಿತ್ತು. ಗ್ರಾಮದ ಬಾವಿಯಿಂದ ನೀರು ಸೇದುವುದಕ್ಕೆ ಕೂಡ ಬಹಿಷ್ಕಾರ ಹಾಕಲಾಗಿತ್ತು.
ಮೂರು ವರ್ಷಗಳ ಹಿಂದೆ ಜಗದೀಶ್ ಬಂಜಾರ ತನ್ನ ಜಮೀನಿನಿಂದ ಬೀದಿ ಹಸುವನ್ನು ಓಡಿಸಿದ್ದರಂತೆ. ಹಸುವನ್ನು ಓಡಿಸಲು ಕಲ್ಲು ಹೊಡೆದಿದ್ದು ಕರುವಿಗೆ ಹೋಗಿ ಬಿತ್ತು. ಕೆಲ ಗಂಟೆಗಳ ನಂತರ ಕರು ಸತ್ತು ಹೋಯಿತು. ಇದಕ್ಕೆ ಬಂಜಾರ ಸಮುದಾಯದ ಹಿರಿಯರು ಜಗದೀಶ್ ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು.
ಅವರು ನೀಡಿದ ಎಲ್ಲಾ ಆದೇಶಗಳನ್ನು ಪಾಲಿಸಿದ್ದೇನೆ. ಗಂಗಾ ನದಿಯಲ್ಲಿ ಸ್ನಾನ ಮಾಡಿ ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಬಂಜಾರ ಸಮುದಾಯದವರಿಗೆ ಸಸ್ಯಾಹಾರ ಭೋಜನ ಎಲ್ಲವನ್ನೂ ನೀಡಿದ್ದೇನೆ. ಆದರೂ ಕೂಡ 3 ವರ್ಷ ನಾನು ಮತ್ತು ನನ್ನ ಕುಟುಂಬದವರಿಗೆ ಬಹಿಷ್ಕಾರ ಹಾಕಲಾಯಿತು ಎಂದು ಜಗದೀಶ್ ಬಂಜಾರ ಹೇಳುತ್ತಾರೆ.
ನಿನ್ನೆ ಮತ್ತೊಮ್ಮೆ ಜಾತಿ ಪಂಚಾಯ್ತಿಯನ್ನು ತರ್ಪುರದಲ್ಲಿ ನಡೆಸಲಾಯಿತು. ಬಹಿಷ್ಕಾರಕ್ಕೆ ಕೊನೆ ಹಾಡುವ ಬದಲು ನಮ್ಮ ಜಾತಿಯ ಹಿರಿಯರು ನನ್ನ 7 ವರ್ಷದ ಮಗಳನ್ನು ವಿದಿಶಾ ಜಿಲ್ಲೆಯ 8 ವರ್ಷದ ಬಾಲಕನಿಗೆ ಮದುವೆ ಮಾಡಿಕೊಡಲು ಹೇಳಿದ್ದಾರೆ. ಯಾಕೆಂದರೆ ಇತರ ಗ್ರಾಮದ ಜನರು ತುರ್ಪುರು ಗ್ರಾಮದವರನ್ನು ಮದುವೆಯಾಗಲು ಒಪ್ಪುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಜಗದೀಶ್.
ಅಸಹಾಯಕರಾದ ಜಗದೀಶ್ ಇದೀಗ ತಮ್ಮ ಮಗಳ ನಿಶ್ಚಿತಾರ್ಥಕ್ಕೆ ಹಣ ಸಂಗ್ರಹಿಸಲು ಆರಂಭಿಸಿದ್ದಾರೆ. ಆದರೆ ಅವರ ಪತ್ನಿ ಗೀತಾ ಈ ಅನ್ಯಾಯದ ವಿರುದ್ಧ ಹೋರಾಡಲು ನಿರ್ಧರಿಸಿದ್ದು ಗುನಾ ಜಿಲ್ಲೆಯ ಅರೋನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಬಳಿ ತೆರಳಿ ಕೇಸು ದೂರು ನೀಡಿದರು.
ಅಧಿಕಾರಿಗಳು ಪೊಲೀಸರ ತಂಡವನ್ನು ಗ್ರಾಮಕ್ಕೆ ಕಳುಹಿಸಿದ್ದು ಮದುವೆ ನಡೆಯದಂತೆ ಎಚ್ಚರಿಕೆ ನೀಡಿದ್ದಾರೆ. ಕಾನೂನನ್ನು ಕೈಗೆ ತೆಗೆದುಕೊಳ್ಳದಂತೆ ಸಮುದಾಯದ ಹಿರಿಯರಿಂದ ಸಹಿ ಪಡೆದುಕೊಂಡಿದ್ದೇವೆ ಎನ್ನುತ್ತಾರೆ ಮ್ಯಾಜಿಸ್ಟ್ರೇಟ್ ನೀರಜ್ ಶರ್ಮಾ.
ಮಧ್ಯ ಪ್ರದೇಶದಲ್ಲಿ ಕಾಂಗರೂ ಕೋರ್ಟ್ ಅನ್ಯಾಯದ ತೀರ್ಮಾನ ನೀಡುತ್ತಿರುವುದು ಇದೇನು ಮೊದಲ ಸಲವಲ್ಲ. ಇಂತಹ ಕ್ರೂರ ತೀರ್ಪು ನೀಡಿ ಅನೇಕರು ಪ್ರಾಣ ಕಳೆದುಕೊಂಡ ಪ್ರಸಂಗ ಕೂಡ ನಡೆದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos