ನವದೆಹಲಿ: ಭದ್ರತೆ ಹಿನ್ನಲೆಯಲ್ಲಿ ಮನೆಗೆ ತೆರಳದಂತೆ ಪೊಲೀಸ್ ಸಿಬ್ಬಂದಿಗಳಿಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸಲಹೆ ನೀಡಿರುವುದು ಮುಫ್ತಿ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸೋಮವಾರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಾಯಕತ್ವ ಪ್ರದರ್ಶಿಸುವುದರಲ್ಲಿ ಹಾಗೂ ಸೂಕ್ತ ರೀತಿಯ ನಿರ್ದೇಶನ ನೀಡುವುದರಲ್ಲಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಸಂಪೂರ್ಣವಾಗಿ ವಿಫಲರಾಗಿದ್ದಾರೆಂದು ಹೇಳಿದ್ದಾರೆ.
ಮೆಹಬೂಬಾ ಮುಫ್ತಿಯವರ ಸರ್ಕಾರ ನಡೆಸುವುದರಲ್ಲಿ ವಿಫಲರಾಗುತ್ತಿದ್ದಾರೆಂಬುದಕ್ಕೆ ಪ್ರತೀನಿತ್ಯ ಒಂದಲ್ಲ ಒಂದು ಸಾಕ್ಷ್ಯಗಳು ದೊರಕುತ್ತಿವೆ. ನಾಯಕತ್ವ ನಿಭಾಯಿಸುವುದರಲ್ಲಿ ಹಾಗೂ ರಾಜ್ಯದ ಕುರಿತಂತೆ ನಿರ್ದೇಶನ ನೀಡುವುದರಲ್ಲಿ ಮುಫ್ತಿ ಸಂಪೂರ್ಣವಾಗಿ ವಿಫಲರಾಗಿದ್ದಾರೆಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹಳೇ ಶ್ರೀನಗರದ ನೌಹಟ್ಟಾ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಗಳ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಉಗ್ರರು, 14 ಮಂದಿ ಭದ್ರತಾ ಸಿಬ್ಬಂದಿಗಳನ್ನು ಬಲಿಪಡೆದುಕೊಂದಿದ್ದರು. ಇದಾದೇ ಕೆಲವೇ ದಿನಗಳಲ್ಲಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿದ್ದ ಹಿರಿಯ ಅಧಿಕಾರಿಗಳ ಮೇಲೆ ಮೇಲೆ ದಾಳಿ ಮಾಡಿದ್ದ ಉಗ್ರರು ಮನೆಯನ್ನು ಧ್ವಂಸಗೊಳಿಸಿ ಬೆದರಿಕೆ ಹಾಕಿದ್ದರು.
ಈ ಹಿನ್ನಲೆಯಲ್ಲಿ ಭದ್ರತಾ ಸಿಬ್ಬಂದಿಗಳಿಗೆ ಸಲಹೆ ನೀಡಿದ್ದ ಮುಫ್ತಿ ಸರ್ಕಾರ, ಭದ್ರತಾ ದೃಷ್ಟಿಯಿಂದ ಮುಂದಿನ 1-2 ತಿಂಗಳವರೆಗೆ ಪೊಲೀಸ್ ಸಿಬ್ಬಂದಿಗಳು ತಮ್ಮ ತಮ್ಮ ಮನೆಗಳಿಗೆ ತೆರಳದಂತೆ ಸೂಚನೆ ನೀಡಿತ್ತು.
ಪೊಲೀಸ್ ಸಿಬ್ಬಂದಿಗಳ ಮೇಲೆ ದಾಳಿ ನಡೆಸುತ್ತಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ. ಉಗ್ರರು, ದೇಶ ವಿರೋಧಿಗಳು, ಸಮಾಜಘಾತುಕ ಶಕ್ತಿಗಳು ಪೊಲೀಸ್ ಸಿಬ್ಬಂದಿಗಳು ಮೇಲೆ ಹಾಗೂ ಅವರ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಹೀಗಾಗಿ ಭದ್ರತೆ ಹಿನ್ನಲೆಯಲ್ಲಿ ಪರಿಸ್ಥಿತಿ ತಿಳಿಗೊಳ್ಳುವವರೆಗೂ 1-2 ತಿಂಗಳ ಕಾಲ ಪೊಲೀಸ್ ಸಿಬ್ಬಂದಿಗಳು ಅವರವರ ಮನೆಗಳಿಗೆ ಭೇಟಿ ನೀಡದಂತೆ ಸಲಹೆ ನೀಡಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮುಫ್ತಿಯವರು ಒಮರ್ ಅಬ್ದುಲ್ಲಾ ಸರ್ಕಾರ ವೈಫಲ್ಯತೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷದಿಂದಲೂ ಕಲ್ಲುತೂರಾಟ ಹಾಗೂ ಹಿಂಸಾಚಾರಗಳು ನಡೆದಿತ್ತು. ಪ್ರಸ್ತುತ ಇರುವ ಪರಿಸ್ಥಿತಿಗೂ ಇದೇ ಕಾರಣ ಎಂದು ಹೇಳಿದ್ದರು.
ಈ ಹೇಳಿಕೆಗೆ ತಿರುಗೇಟು ನೀಡಿದ್ದ ಒಮರ್ ಅಬ್ದುಲ್ಲಾ ತಂದೆ ಫರೂಖ್ ಅಬ್ದುಲ್ಲಾ ಅವರು, ಕಾಶ್ಮೀರದಲ್ಲಿ ಕಲ್ಲುತೂರಾಟಕ್ಕೆ ಮುಫ್ತಿ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ ಎಂದು ಆರೋಪಿಸಿದ್ದರು.