ಬೆಂಗಳೂರು: ಬಿರು ಬಿಸಿಲಿನಿಂದಾಗಿ ಬೆಂದಿದ್ದ ನಗರದಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಮಳೆ ತಂಪೆರೆಯಿತು. ಬಿಸಿಲಿನಿಂದಾಗಿ ಕಾದಿದ್ದ ಬೆಂಗಳೂರು ನಗರ ಮಳೆಯಿಂದಾಗಿ ಸ್ವಲ್ಪ ತಂಪಾಯಿತು.
ನಿನ್ನೆ ಮಧ್ಯಾಹ್ನದಿಂದಲ್ ನಗರದಲ್ಲಿ ಮೋದ ಕವಿದ ವಾತಾವರಣ ಸೃಷ್ಟಿಯಾಗಿತ್ತು. 4 ಗಂಟೆ ಸುಮಾರಿಗೆ ದಿಢೀರ್ ಅರಂಭವಾದ ಮಳೆ, ನಗರದ ವಿವಿಧ ಭಾಗಗಳಲ್ಲಿ ಸುರಿಯಿತು. ಕೇವಲ 20 ನಿಮಿಷ ಸುರಿದ ಮಳೆಯಿಂದಾಗಿ ಮೆಜೆಸ್ಟಿಕ್. ಕೆ.ಆರ್. ಮಾರುಕಟ್ಟೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಇದರಿಂದಾಗಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು ದ್ವಿಚಕ್ರವಾಹನ ಸವಾರರು ಪರದಾಡುವಂತಾಯಿತು.
ವಿಧಾನಸೌಧ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೆಚ್ಎಎಲ್ ವಿಮಾನ ನಿಲ್ದಾಣ ಸೇರಿದಂತ ವಿವಿಧ ಭಾಗಗಳಲ್ಲಿ ನಿನ್ನೆ ಮಳೆಯಾಗಿದ್ದು, 9 ಮಿ.ಮೀ ನಿಂದ 0.5 ಮಿ.ಮೀ.ನಷ್ಟು ಮಳೆಯಾಗಿದೆ.
ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗಲಿದ್ದು, ಮುಂದಿನ ದಿನಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣದ ವಿಜ್ಞಾನಿ ಎಸ್ಎಸ್ಎಂ ಗವಾಸ್ಕರ್ ಅವರು ತಿಳಿಸಿದ್ದಾರೆ.