ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಸೂರತ್: ನೈರ್ಮಲ್ಯದ ಪ್ರಾಮುಖ್ಯತೆಯನ್ನು ವಿಶ್ವಾದ್ಯಂತ ಆರೋಗ್ಯ ಸಮೀಕ್ಷೆಗಳು ಮತ್ತೆ ಸಾರುತ್ತಿರುವಾಗ ನಮ್ಮ ದೇಶದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚಿನ ಮಂದಿ ಗಮನಹರಿಸುವುದಿಲ್ಲ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನ ಆರೋಗ್ಯ ಕಾಪಾಡಿಕೊಳ್ಳುವ ಕ್ರಮಗಳ ಒಂದು ಭಾಗ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಸೂರತ್ ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಇದು ಇತರ ನಗರಗಳಿಗೆ ಮಾದರಿಯಾಗಲಿದೆ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಹೊಗಳಿದರು.
ಸೂರತ್ ನಲ್ಲಿ ಅವರಿಂದು ಕಿರಣ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು,ತಮ್ಮ ರಾಜ್ಯದಲ್ಲಿ ಹಿಂದಿಯಲ್ಲಿ ಮಾತನಾಡಬೇಕೆ ಅಥವಾ ಗುಜರಾತಿಯಲ್ಲಿ ಮಾತನಾಡಬೇಕೆ ತಿಳಿಯುತ್ತಿಲ್ಲ ಎಂದು ತಮಾಷೆ ಮಾಡಿದರು. ಆದರೂ ತಾನು ಹಿಂದಿಯಲ್ಲಿ ಮಾತನಾಡುತ್ತೇನೆ ಯಾಕೆಂದರೆ ಇಲ್ಲಿನ ಜನ ಅತ್ಯುತ್ತಮ ಕೆಲಸ ಮಾಡಿದ್ದಾರೆ, ಇಡೀ ದೇಶದ ಜನಕ್ಕೆ ಇದು ಗೊತ್ತಾಗಬೇಕು ಎಂದರು.
''ದುಡಿಮೆ ಹಣಕ್ಕಿಂತ ಹೆಚ್ಚು ಮೌಲ್ಯಯುತವಾದುದು. ನಾನು ಶಂಕು ಸ್ಥಾಪನೆ ಮಾಡಿದ್ದನ್ನು ನಾನೇ ಉದ್ಘಾಟಿಸುತ್ತೇನೆ. ಯಾಕೆಂದರೆ ಅಲ್ಲಿ ಕೆಲಸ ಮುಗಿದಿದೆಯೇ, ಇಲ್ಲವೇ ಎಂದು ನೋಡಬೇಕು. ಮಾಜಿ ಪ್ರಧಾನಿ ವಾಜಪೇಯಿಯವರ ನಂತರ 15 ವರ್ಷಗಳು ಕಳೆದ ಮೇಲೆ ದೇಶದಲ್ಲಿ ಆರೋಗ್ಯಸೇವೆ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಹೇಳಿದರು.
ವೈದ್ಯರು ವಿಶೇಷ ಔಷಧಿಗಳನ್ನು ಮಾತ್ರ ನೀಡುವ ಕುರಿತು ಸರ್ಕಾರ ಭರವಸೆ ಕೊಡಲಿದೆ. ಆ ಮೂಲಕ ದೊಡ್ಡ ಔಷಧಿ ಮಳಿಗೆಗಳ ಏಕಸ್ವಾಮ್ಯವನ್ನು ತಡೆಯಬಹುದು ಎಂದರು.
ಜನರ ಅಭಿವೃದ್ಧಿಗೆ 500 ಕೋಟಿ ರೂಪಾಯಿ ಯೋಜನೆಯನ್ನು ಸೂರತ್ ನ ವಜ್ರದ ವ್ಯಾಪಾರಿಗಳು ತೆಗೆದುಕೊಂಡದ್ದಕ್ಕೆ ಪ್ರಧಾನಿ ಶ್ಲಾಘಿಸಿದರು.
ಬಡ ಜನರಿಗೆ ಅನುಕೂಲವಾಗಲು ಸುಮಾರು 700 ಔಷಧಿಗಳ ಬೆಲೆಯನ್ನು ಕಡಿಮೆ ನಿಗದಿಪಡಿಸಲಾಗಿದ್ದು, ಇದು ದೊಡ್ಡ ಕಂಪೆನಿಗಳಿಗೆ ಬೇಸರ ತಂದಿರಬಹುದು. ಆದರೆ ದೇಶದ ಬಡ ಮತ್ತು ಮಧ್ಯಮ ವರ್ಗದವರ ಅನುಕೂಲಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ತಿಳಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos