ದೇಶ

ವಿಐಪಿ ವಾಹನಗಳ ಮೇಲೆ ಕೆಂಪು ದೀಪಕ್ಕೆ ನಿಷೇಧ: ದೇಶದ ಪ್ರತೀ ಭಾರತೀಯನೂ ವಿಐಪಿ ಎಂದ ಪ್ರಧಾನಿ ಮೋದಿ

Manjula VN
ನವದೆಹಲಿ: ದೇಶದಲ್ಲಿರುವ ಪ್ರತೀ ಭಾರತೀಯರೂ ವಿಶೇಷರೇ, ಪ್ರತೀ ಭಾರತೀಯರೂ ವಿಐಪಿಗಳೇ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ.
ವಿಐಪಿ ಸಂಸ್ಕೃತಿಯ ಪ್ರತೀಕದಂತಿರುವ, ಸರ್ಕಾರಿ ವಾಹನಗಳ ಮೇಲೆ ಕೆಂಪುಗೂಟ ಬಳಸುವ ದಶಕಗಳ ಸಂಪ್ರಾದಯಕ್ಕೆ ಕೇಂದ್ರ ಸರ್ಕಾರ ಎಳ್ಳು ನೀರು ಬಿಟ್ಟಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ದೇಶದಲ್ಲಿರುವ ಪ್ರತೀ ಭಾರತೀಯರೂ ವಿಶೇಷರೇ, ಪ್ರತೀಯೊಬ್ಬ ಭಾರತೀಯನೂ ವಿಐಪಿಯೇ ಎಂದು ಹೇಳಿದ್ದಾರೆ. 
ಮೋದಿ ಸರ್ಕಾರದ ಈ ನಿರ್ಧಾರಕ್ಕೆ ಟ್ವಿಟರ್ ಹಲವು ಜನರು ಬೆಂಬಲ ವ್ಯಕ್ತಪಡಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನರ ಮೆಚ್ಚುಗೆಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ಬೆಳವಣಿಗೆ ಬಹಳ ಹಿಂದೆಯೇ ಆಗಬೇಕಿತ್ತು, ಆದರೆ, ಆ ಬೆಳವಣಿಗೆಗಳ ಆರಂಭ ಇದೀಗ ಆಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ ನವ ಭಾರತದ ಶಕ್ತಿಗೆ ಇನ್ನು ಮುಂದೆ ಈ ಚಿಹ್ನೆಗಳು ದೂರ ಉಳಿಯಲಿದೆ ಎಂದು ತಿಳಿಸಿದ್ದಾರೆ. 
ನಿನ್ನೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿತ್ತು. ಕೇಂದ್ರ ಸಂಪುಟ ಸಭೆಯಲ್ಲಿ ಸರ್ಕಾರಿ ವಾಹನಗಳಲ್ಲಿ ವಿಐಪಿಗಳು ಕೆಂಪು ದೀಪ ಬಳಸುವುದಕ್ಕೆ ನಿಷೇಧ ಹೇರುವ ತೀರ್ಮಾನವನ್ನು ಕೈಗೊಂಡಿತ್ತು. ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಯಾವುದೇ ಗಣ್ಯ ವ್ಯಕ್ತಿಗಳ ಕಾರಿನಲ್ಲಿ ಮೇ.1 ರಿಂದ ಕೆಂಪುದೀಪ ಬಳಸದೇ ಇರುವ ಐತಿಹಾಸಿಕ ನಿರ್ಣಯವನ್ನು ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆ ತೆಗೆದುಕೊಂಡಿತ್ತು. 
ಕೇಂದ್ರ ಸರ್ಕಾರ ಈ ನಿರ್ಣಯದಲ್ಲಿ ಕೆಲ ಗೊಂದಲಗಳು ಕೂಡ ಸೃಷ್ಟಿಯಾಗಿದೆ. ವಿವಿಐಪಿಗಳು ಬಂದಾಗ ಪೊಲೀಸರು ರಸ್ತೆ ಬಂದ್ ಮಾಡಿಸಿ, ಸಾರ್ವಜನಿಕರಿಗೆ ತೊಂದರೆ ನೀಡುವ ಸಂಸ್ಕೃತಿ ಅಂತ್ಯವಾಗುವ ಬಗ್ಗೆ ನಿರ್ಣಯದಲ್ಲಿ ಉಲ್ಲೇಖ ಮಾಡಿರಲಿಲ್ಲ. ಈ ಹಿನ್ನಲೆಯಲ್ಲಿ ಇದಕ್ಕೆ ಅಂತ್ಯ ಹಾಡದ ಹೊರತು ಕೆಂಪುಗೂಡ ನಿಷೇಧದಿಂದ ಜನರಿಗೆ ಹೆಚ್ಚಿನ ಉಪಯೋಗವಾಗದು ಎಂಬ ಮಾತುಗಳು ಕೇಳಿಬರುತ್ತಿವೆ. 
ಮಂತ್ರಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಕೆಂಪುದೀಪದ ಕಾರು ಬಳಸಬಾರದು ಎಂದು 2013ರಲ್ಲೇ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ತಕ್ಷಣವೇ ಕೆಂಪುಗೂಡ ತೆಗೆಸಲು ಆದೇಶಿಸಿತ್ತು. ಆದರೆ, ರಾಷ್ಟ್ರಪತಿ, ಪ್ರಧಾನಮಂತ್ರಿಗಳಂತಹ ಅತ್ಯುನ್ನತ ಗಣ್ಯರಿಗೆ ವಿನಾಯಿತಿ ನೀಡಿತ್ತು. ಆದರೂ ತನ್ನ ಆದೇಶ ಕೆಲವೆಡೆ ಪಾಲನೆಯಾಗದ ಹಿನ್ನಲೆಯಲ್ಲಿ ಕೆಂಪುದೀಪ ಬಳಸುವ ವಿಐಪಿಗಳ ಪಟ್ಟಿ ತಯಾರಿಸುವಂತೆ ಸೂಚನೆ ನೀಡಿತ್ತು. 
ಕಳೆದ ತಿಂಗಳು ಉತ್ತರಪ್ರದೇಶ ಹಾಗೂ ಪಂಜಾಬ್ ರಾಜ್ಯಗಳ ಮುಖ್ಯಮಂತ್ರಿಗಳಾಗಿ ಯೋಗಿ ಆದಿತ್ಯನಾಥ್ ಮತ್ತು ಅಮರೀಂದರ್ ಸಿಂಗ್ ಅವರು ಕೆಂಪುದೀಪ ಬಳಕೆ ನಿಲ್ಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದರು. 
SCROLL FOR NEXT