ನವದೆಹಲಿ: 9 ಮತ್ತು 10ನೇ ತರಗತಿಗಳಲ್ಲಿ ಸಂಸ್ಕೃತ, ಪಂಜಾಬಿ ಮತ್ತು ಉರ್ದು ಭಾಷೆಗಳನ್ನು ಮೂರನೇ ಭಾಷಾ ಅಧ್ಯಯನವಾಗಿ ಬೋಧಿಸುವುದನ್ನು ನಿಲ್ಲಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ, ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಕ್ಕೆ ನೊಟೀಸ್ ಕಳುಹಿಸಿದೆ.
ಸಂಸ್ಕೃತದಂತಹ ಭಾಷಾ ಕಲಿಕೆಯನ್ನು ಬದಲಾಯಿಸಿ ವೃತ್ತಿಪರ ವಿಷಯಗಳನ್ನು 9 ಮತ್ತು 10ನೇ ತರಗತಿಯಲ್ಲಿ 6ನೇ ಕಡ್ಡಾಯ ವಿಷಯವಾಗಿ ಬೋಧಿಸುವ ದೆಹಲಿಯ ಆಮ್ ಆದ್ಮಿ ಸರ್ಕಾರದ ಶೈಕ್ಷಣಿಕ ನೀತಿಯನ್ನು ಪ್ರಶ್ನಿಸಿ ಮೊನ್ನೆ 18ರಂದು ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಸೊಸೈಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಸರ್ಕಾರಿ ಶಾಲೆಗಳಿಗೆ ಅನ್ವಯವಾಗುವ ಈ ನಿರ್ಧಾರದಿಂದ ಸಂಸ್ಕೃತ, ಉರ್ದು ಮತ್ತು ಪಂಜಾಬಿಯಂತಹ ಭಾಷೆಗಳ ಅಳಿವಿಗೆ ಕಾರಣವಾಗುತ್ತದೆ. ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನಡಿಯಲ್ಲಿ 10ನೇ ತರಗತಿಗೆ ಮೌಲ್ಯಮಾಪನ ಯೋಜನೆಯ ಮರು ಮಾದರಿಯ ಸಿಬಿಎಸ್ ಇ ಸುತ್ತೋಲೆಯನ್ನು ಕೂಡ ಸೊಸೈಟಿ ಅರ್ಜಿಯಲ್ಲಿ ಪ್ರಶ್ನಿಸಿದೆ.