ನವದೆಹಲಿ: ಇವಿಎಂ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದಿಂದ ಶೀಘ್ರದಲ್ಲೇ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ನಜೀಂ ಝೈದಿ ಅವರು ಶನಿವಾರ ಹೇಳಿದ್ದಾರೆ.
ಇವಿಎಂ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಝೈದಿ ಅವರು, ಈ ಸಂಬಂಧ ಶೀಘ್ರದಲ್ಲಿ ಸರ್ವಪಕ್ಷ ಸಭೆ ಕರೆದು, ನಮ್ಮ ತಂತ್ರಜ್ಞಾನ ಸುರಕ್ಷತಾ ವ್ಯವಸ್ಥೆಯ ಪ್ರಕಾರ ಇವಿಎಂಗಳು ಸುರಕ್ಷಿತವಾಗಿದ್ದು, ಅವುಗಳನ್ನು ತಿರುಚಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಚುನಾವಣೆಯಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಮತ್ತು ಇವಿಎಂ ಬಗ್ಗೆ ಜನರ ನಂಬಿಕೆ ಗಳಿಸುವುದಕ್ಕಾಗಿ ಮುಂಬರುವ ಎಲ್ಲಾ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ(ಇವಿಎಂ)ಗಳ ಜತೆಗೆ ಮತ ಪರಿಶೀಲನಾ ವ್ಯವಸ್ಥೆ(VVPAT–voter verifiable paper audit trail)ಯನ್ನು ಅಳವಡಿಸಿಕೊಳ್ಳುವ ಉದ್ದೇಶ ಇದೆ ಎಂದರು.