ನವದೆಹಲಿ: ಗಣ್ಯ ವ್ಯಕ್ತಿಗಳು ಮತ್ತು ಅತಿ ಗಣ್ಯ ವ್ಯಕ್ತಿಗಳು ಹೋಗವ ಸರ್ಕಾರದ ವಾಹನಗಳಲ್ಲಿ ಕೆಂಪು ದೀಪ ಉರಿಯುವ ಸಂಸ್ಕೃತಿಗೆ ತಿಲಾಂಜಲಿ ಹಾಡಲಾಗಿದ್ದು ನಾಳೆಯಿಂದ ಜಾರಿಗೆ ಬರಲಿದೆ.
ಅಧಿಕಾರದಲ್ಲಿರುವವರ ಗುರುತಾಗಿ ಕೆಂಪು ದೀಪ ಅಥವಾ ಹಿಂದಿಯಲ್ಲಿ ಖ್ಯಾತವಾಗಿ ಹೇಳುವ ಲಾಲ್ ಬತ್ತಿಯನ್ನು ವಾಹನಗಳಲ್ಲಿ ಅಳವಡಿಸಲಾಗಿತ್ತು. ಇನ್ನು ಮುಂದೆ ಅತಿ ಗಣ್ಯ ವ್ಯಕ್ತಿಗಳೆಂದು ಕರೆಸಿಕೊಳ್ಳುವವರು ಹೋಗುವ ವಾಹನಗಳಲ್ಲಿ ಕೆಂಪು ದೀಪ ಉರಿಯುವುದಿಲ್ಲ. ಈ ಸಂಬಂಧ ಕೇಂದ್ರ ಸಂಪುಟ ಈ ತಿಂಗಳ ಆರಂಭದಲ್ಲಿ ಅಧಿಸೂಚನೆ ಪ್ರಕಟಿಸಿತ್ತು.
ಪ್ರಧಾನ ಮಂತ್ರಿಯವರ ನವ ಭಾರತದ ಪರಿಕಲ್ಪನೆಯನ್ನು ಇದು ಸಾರಲಿದ್ದು, ಅತಿ ಗಣ್ಯ ವ್ಯಕ್ತಿಗಳ ಬದಲಿಗೆ ಇಪಿಐ ಪ್ರತಿ ವ್ಯಕ್ತಿ ಮುಖ್ಯ ಪರಿಕಲ್ಪನೆ ಜಾರಿಗೆ ಬರಬೇಕೆಂದು ಮೋದಿಯವರ ಆಶಯವಾಗಿದೆ.
ನಾನು ವಿಐಪಿ ಬದಲಿಗೆ ಇಪಿಐ ಅಂದರೆ ಅದರ ಅರ್ಥ ಸರಳವಾಗಿದೆ. ಪ್ರತಿ ವ್ಯಕ್ತಿ ಪ್ರಾಮುಖ್ಯ ಎಂದರ್ಥ. ಪ್ರತಿ ವ್ಯಕ್ತಿಗೆ ಗೌರವ ಮತ್ತು ಪ್ರಾಮುಖ್ಯತೆ ಇರುತ್ತದೆ. ಭಾರತದ 123 ಕೋಟಿ ಜನರ ಪ್ರಾಮುಖ್ಯತೆಯನ್ನು ನಾವು ಗುರುತಿಸಿದರೆ ಕನಸನ್ನು ನನಸು ಮಾಡಲು ದೇಶದ ಶಕ್ತಿಯನ್ನು ಕಲ್ಪಿಸಿಕೊಳ್ಳಿ. ನಾವೆಲ್ಲರೂ ಇದನ್ನು ಒಟ್ಟು ಸೇರಿ ಮಾಡಬೇಕು ಎಂದು ಇಂದು ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಹೇಳಿದ್ದರು.
ಪ್ರಧಾನ ಮಂತ್ರಿ, ಮುಖ್ಯ ಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸಚಿವರುಗಳು, ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ಗಳ ನ್ಯಾಯಾಧೀಶರು ಸಂಚರಿಸುವ ಸರ್ಕಾರಿ ವಾಹನಗಳಲ್ಲಿ ಇನ್ನು ಮುಂದೆ ಕೆಂಪು ದೀಪ ಇರುವುದಿಲ್ಲ. ಆಂಬ್ಯುಲೆನ್ಸ್, ಅಗ್ನಿ ಶಾಮಕ ವಾಹನಗಳು, ಪೊಲೀಸ್ ಕಾರುಗಳು ತುರ್ತು ಸಂದರ್ಭಗಳಲ್ಲಿ ಬಳಸುವ ವಾಹನಗಳಿಗೆ ನೀಲಿ ದೀಪಗಳನ್ನು ಅಳವಡಿಸಲು ಕೇಂದ್ರ ಸಂಪುಟ ನಿಯಮಕ್ಕೆ ತಿದ್ದುಪಡಿ ತರಲು ನಿರ್ಧರಿಸಿದ್ದು ಈ ಬಗ್ಗೆ ಸದ್ಯದಲ್ಲಿಯೇ ಅಧಿಸೂಚನೆ ಹೊರಡಿಸಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos