ಬೆಂಗಳೂರು: ಬಿಜೆಪಿಯಲ್ಲಿ ಈಶ್ವರಪ್ಪ-ಯಡಿಯೂರಪ್ಪ ಬಣದ ನಡುವಿನ ಭಿನ್ನಮತ ಬಗೆಹರಿಸಲು ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ ಗೆ ಶೀಘ್ರವೇ ಭಿನ್ನಮತ ಬಗೆಹರಿಸುವ ಒತ್ತಡ ಉಂಟಾಗಿದೆ.
ಯಡಿಯೂರಪ್ಪ ಬಣ ಹಾಗೂ ತಟಸ್ಥವಾಗಿರುವ ಬಣದ ಬಿಜೆಪಿ ನಾಯಕರೊಂದಿಗೆ ಏ.30 ರಂದು ಮುರಳಿಧರ್ ರಾವ್ ಚರ್ಚೆ ನಡೆಸಿದ್ದು, ಮೇ.2 ರೊಳಗೆ ಭಿನ್ನಮತದ ಸಮಸ್ಯೆಯನ್ನು ಬಗೆಹರಿಸುವಂತೆ ರಾಜ್ಯ ಬಿಜೆಪಿ ಉಸ್ತುವಾರಿಗೆ ನಾಯಕರು ಒತ್ತಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮೇ.6-7 ರಂದು ಮೈಸೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಕಾರ್ಯಕಾರಿಣಿ ಸಭೆ ಪ್ರಾರಂಭವಾಗುವುದಕ್ಕೂ ಮುನ್ನ ಮೇ.2 ರ ಒಳಗೆ ಭಿನ್ನಮತದ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ಮುರಳಿಧರ್ ರಾವ್ ಅವರೊಂದಿಗೆ ನಡೆದ ಸಭೆಯಲ್ಲಿ ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ.
ಮೇ.2 ರೊಳಗೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಮುರಳಿಧರ್ ರಾವ್ ಸಹ ಭರವಸೆ ನೀಡಿದ್ದು, ಎಲ್ಲರ ಅಭಿಪ್ರಾಯವನ್ನು ಹೈಕಮಾಂಡ್ ಮುಂದಿಡುವುದಾಗಿ ತಿಳಿಸಿದ್ದಾರೆ.
ಮುರಳಿಧರ್ ರಾವ್ ವಿರುದ್ಧ ಈಶ್ವರಪ್ಪ ಬೇಸರ
ಇನ್ನು ಭಿನ್ನಮತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೊದಲ ಭಾಗವಾಗಿ ಯಡಿಯೂರಪ-ಈಶ್ವರಪ್ಪ ಬಣದ ಕೆಲವು ನಾಯಕರನ್ನು ಪಕ್ಷದ ಹುದ್ದೆಯಿಂದ ವಜಾಗೊಳಿಸಲಾಗಿದೆ. ಈಶ್ವರಪ್ಪ ತಮ್ಮ ಬೆಂಬಲಿಗರನ್ನು ಪಕ್ಷದ ಹುದ್ದೆಯಿಂದ ವಜಾಗೊಳಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದು, ಮುರಳಿಧರ್ ರಾವ್ ಅವರನ್ನು ಭೇಟಿ ಮಾಡದೇ ಶಿವಮೊಗ್ಗಕ್ಕೆ ತೆರಳಿದ್ದಾರೆ.