ದೇಶ

ದ್ವೇಷಕ್ಕಾಗಿ ದಲಿತರ ಬಾವಿಗೆ ಸೀಮೆಎಣ್ಣೆ ಸುರಿದ ದುಷ್ಕರ್ಮಿಗಳು!

Manjula VN
ಅಗಲ್ ಮಾಲ್ವಾ (ಮಧ್ಯಪ್ರದೇಶ): ದಲಿತ ಮೇಲಿನ ದ್ವೇಷ ಹಾಗೂ ಜಾತಿ ಮೇಲಾಟಕ್ಕಾಗಿ ದಲಿತರು ಉಪಯೋಗಿಸುತ್ತಿರುವ ಬಾವಿಯೊಂದಕ್ಕೆ ದುಷ್ಕರ್ಮಿಗಳು ಸೀಮೆಎಣ್ಣೆ ಸುರಿದು, ನೀರು ಕುಡಿಯದಂತೆ ಮಾಡಿರುವ ಘಟನೆಯೊಂದು ಮಧ್ಯಪ್ರದೇಶದ ಮಾನ ಎಂಬ ಗ್ರಾಮದಲ್ಲಿ ನಡೆದಿದೆ. 
ದಲಿತ ಕುಟುಂಬಕ್ಕೆ ಸೇರಿದ ಛಂದೇರ್ ಮೇಘ್ವಾಲ್ ಎಂಬುವವರು ಇತ್ತೀಚೆಗಷ್ಟೇ ತಮ್ಮ ಮಗಳ ಮದುವೆ ಸಮಾರಂಭವನ್ನು ಅದ್ಧೂರಿಯಾಗಿ ಏರ್ಪಡಿಸಿದ್ದರು. ಬ್ಯಾಂಡ್ ಪಾರ್ಟಿಗಾಗಿ ಮೇಘ್ವಾಲ್ ಅವರು ಗ್ರಾಮದವರಿಗೆ ಆಹ್ವಾನ ನೀಡಿದ್ದರು. ಈ ಮೆರವಣಿಗೆಗೆ ಕೆಲ ಗ್ರಾಮಸ್ಥರು ಹಾಗೂ ಮೇಲ್ಜಾತಿಯವರು ವಿರೋಧ ವ್ಯಕ್ತಪಡಿಸಿದ್ದರು. ಮೇಘ್ವಾಲ್ ಅವರಿಗೆ ಬೆದರಿಕೆಯೊಡ್ಡಿದ್ದರು. 
ಬೆದರಿಕೆ ಹಿನ್ನಲೆಯಲ್ಲಿ ಮೇಘ್ವಾಲ್ ಅವರು ಪೊಲೀಸರಿಗೆ ಮಾಹಿತಿ ನೀಡಿ ಬಿಗ ಭದ್ರತೆಯೊಂದಿಗೆ ಮದುವೆ ಮಾಡಿದ್ದರು. 
ಮೇಘ್ವಾಲ್ ಅವರ ಮೇಲೆ ದ್ವೇಷವನ್ನು ಮುಂದುವರೆಸಿಕೊಂಡು ಬಂದಿದ್ದ ದುಷ್ಕರ್ಮಿಗಳ ತಂಡವೊಂದು 500 ದಲಿತ ಕುಟುಂಬಗಳು ಕುಡಿಯುವುದಕ್ಕಾಗಿ ಬಳಸುತ್ತಿದ್ದ ಬಾವಿಗೆ ಸೀಮೆಎಣ್ಣೆ ಹಾಕಿ ವಿಷ ಬೆರೆಸಿದ್ದಾರೆ. 
ಇನ್ನು ಕುಡಿಯುವ ನೀರಿಗಾಗಿ ಇಲ್ಲಿನ ಜನರು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ಬಾವಿಯಲ್ಲಿನ ನೀರನ್ನು ಖಾಲಿ ಮಾಡಿ, ಹೊಸ ನೀರು ಬರುವಂತೆ ವ್ಯವಸ್ಥೆ ಮಾಡಿದ್ದಾರೆ. 
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಿ.ವಿ. ಸಿಂಗ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಪ್ರತೀಯೊಂದು ಕುಟುಂಬಕ್ಕೂ ಬೋರ್ ವೆಲ್ ಹಾಕಿಸಿಕೊಡುವುದಾಗಿ ಭರವಸೆ ನೀಡಿರು ಅವರು, ಮುಂದೆ ಭವಿಷ್ಯದಲ್ಲಿ ಈ ರೀತಿಯ ಸಮಸ್ಯೆಗಳನ್ನು ಎದುರಿಸದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. 
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
SCROLL FOR NEXT