ನವದೆಹಲಿ: ನ್ಯಾಯಮೂರ್ತಿ ಕರ್ಣನ್ ಮಾನಸಿಕ ಆರೋಗ್ಯ ಪರೀಕ್ಷೆ ನಡೆಸುವಂತೆ ಸುಪ್ರೀಂಕೋರ್ಟ್ ಸೋಮವಾರ ಅಧಿಕಾರಿಗಳಿಗೆ ಆದೇಶ ನೀಡಿದೆ.
ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕರ್ಣನ್ ಅವರ ಮಾನಸಿಕ ಆರೋಗ್ಯ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಸುಪ್ರೀಂ, ಪರೀಕ್ಷೆಗೆ ಕೋಲ್ಕತಾ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಿಂದ ವೈದ್ಯಕೀಯ ತಂಡ ರಚಿಸುವಂತೆ ಆದೇಶಿಸಿದೆ.
ನ್ಯಾಯಾಂಗ ನಿಂದನೆ ಕುರಿತ ವಿಚಾರಣೆ ನ್ಯಾಯಾಲಯದ ಅಂಗಳದಲ್ಲಿರುವುದರಿಂದ ಫೆಬ್ರವರಿ 8 ರಿಂದ ಕರ್ಣನ್ ಅವರು ನೀಡಿದ್ದ ಯಾವುದೇ ಹೇಳಿಕೆಗಳನ್ನು ಅಧಿಕಾರಿಗಳು ಪರಿಗಣನೆಗೆ ತೆಗೆದುಕೊಳ್ಳಬಾರದು. ಈ ವರೆಗೂ ಕರ್ಣನ್ ನೀಡಿದ್ದ ಆದೇಶಗಳೆಲ್ಲವನ್ನೂ ಅಮಾನ್ಯ ಮಾಡುತ್ತಿದ್ದೇವೆ. ಮೇ.8ರೊಳಗಾಗಿ ಕರ್ಣನ್ ಅವರು ಮಾನಸಿಕ ಆರೋಗ್ಯ ಕುರಿತಂತೆ ವರದಿ ಸಲ್ಲಿಸಬೇಕು.
ಜೊತೆಗೆ ನ್ಯಾಯಾಂಗ ನಿಂದನೆ ಬಗ್ಗೆ ಕರ್ಣನ್ ಅವರು ಪ್ರತಿಕ್ರಿಯೆ ನೀಡಬೇಕು. ಒಂದು ವೇಳೆ ಪ್ರತಿಕ್ರಿಯೆ ನೀಡದಿದ್ದ, ಪೀಠವು ನ್ಯಾಯಾಂಗ ನಿಂದನೆಯಾಗಿ ಪರಿಗಣಿಸುತ್ತದೆ ಎಂದು ಸುಪ್ರೀಂ ಸೂಚಿಸಿದೆ. ಅಲ್ಲದೆ, ಮುಂದಿನ ವಿಚಾರಣೆಯನ್ನು ಮೇ.9ರಂದು ನಡೆಸುವುದಾಗಿ ತಿಳಿಸಿದೆ.
ಕಳೆದ ಬಾರಿ ವಿಚಾರಣೆ ನಡೆದ ವೇಳೆ, ಪ್ರಕರಣದ ಪ್ರಾಮುಖ್ಯ ಅರಿಯುವುಷ್ಟು ಕರ್ಣನ್ ಮಾನಸಿಕವಾಗಿ ಆರೋಗ್ಯವಾಗಿದ್ದಾರಾ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್ ಅವರು ಪ್ರಶ್ನಿಸಿದ್ದರು. ಅಲ್ಲದೆ, ಮಾನಸಿಕ ಆರೋಗ್ಯದ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿದ್ದರು. ಕೆಲಸಕ್ಕೆ ಸಂಬಂಧಿಸಿದ ಅನಿಶ್ಚಿತತೆ ಇದೆಯಾ ಎಂದು ಕೂಡ ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕರ್ಣನ್ ಅವರು ನನ್ನ ಕೆಲಸ ಮತ್ತೆ ಆರಂಭಿಸುವುದಕ್ಕೆ ಅವಕಾಶ ನೀಡುವವರೆಗೂ ನ್ಯಾಯಾಲಯಕ್ಕೆ ಹಾಜರಾಗಲ್ಲ. ನಾನು ಜೈಲಿಗೆ ಹೋಗುವುದ್ಕಕೂ ಸಿದ್ಧ ಎಂದು ಹೇಳಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos