ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ನವದೆಹಲಿ: ಪಾಕಿಸ್ತಾನ ತನ್ನ ಉಗ್ರವಾದವನ್ನು ನಿಲ್ಲಿಸಿದ ಬಳಿಕವಷ್ಟೇ ಭಾರತ ಆ ರಾಷ್ಟ್ರದೊಂದಿಗೆ ಮಾತುಕತೆ ನಡೆಸಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗುರುವಾರ ಹೇಳಿದ್ದಾರೆ.
ಸಂಸತ್ತಿನಲ್ಲಿ ವಿದೇಶಾಂಗ ನೀತಿ ಕುರಿತಂತೆ ಮಾತನಾಡಿರುವ ಅವರು, ಉಗ್ರವಾದ ಮತ್ತು ಮಾತುಕತೆ ಏಕಕಾಲದಲ್ಲಿ ಸಾಗಲು ಸಾಧ್ಯವಿಲ್ಲ. ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನ ನೀಡುವ ಬೆಂಬಲವನ್ನು ಸ್ಥಗಿತಗೊಳಿಸಿದ ಬಳಿಕವಷ್ಟೇ ಗಡಿ ವಿಚಾರ ಕುರಿತಂತೆ ಆ ರಾಷ್ಟ್ರದೊಂದಿಗೆ ಮಾತುಕತೆ ನಡೆಸುತ್ತೇವೆಂದು ಹೇಳಿದ್ದಾರೆ.
ಸಂಸತ್ತಿನ ಅಧಿವೇಶನದ ವೇಳೆ ಗಡಿಯಲ್ಲಿ ಪಾಕಿಸ್ತಾನ ತನ್ನ ಉದ್ಧಟತನವನ್ನು ಮುಂದುವರೆಸುತ್ತಿದ್ದರೂ ಮೋದಿ ಸರ್ಕಾರ ಮಾತ್ರ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ವಿರೋಧ ಪಕ್ಷಗಳ ನಾಯಕರ ಆರೋಪಕ್ಕೆ ಉತ್ತರಿಸಿರುವ ಸುಷ್ಮಾ ಸ್ವರಾಜ್ ಅವರು, ಗಡಿ ಮಾತುಕತೆ ನಡೆಸಬೇಕಾದರೆ ಮೊದಲು ಪಾಕಿಸ್ತಾನ ತನ್ನ ಉಗ್ರವಾದವನ್ನು ನಿಲ್ಲಿಸಬೇಕು. ಉಗ್ರವಾದ ನಿಲ್ಲಿಸುವವರೆಗೂ ನಾವು ಯಾವುದೇ ವಿಚಾರವಾಗಿಯೂ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದಿದ್ದಾರೆ.
ಪಾಕಿಸ್ತಾನದ ಕುರಿತ ನಮ್ಮ ನಿಲುವಿನ ಕುರಿತು ನೀವು ಪ್ರಶ್ನೆ ಮಾಡುತ್ತಿದ್ದೀರಾ? ಮೋದಿ ಸರ್ಕಾರ ಪ್ರಮಾಣವಚನ ಸ್ವೀಕಾರದ ವೇಳೆ ನಾವು ಪಾಕಿಸ್ತಾನ ಪ್ರಧಾನಮಂತ್ರಿಗಳು ಸೇರಿ ನೆರೆಯ ಎಲ್ಲಾ ರಾಷ್ಟ್ರಗಳ ಪ್ರಮುಖ ನಾಯಕರಿಗೆ ಆಹ್ವಾನ ನೀಡಿದ್ದೆವು. ಇದಾದ ಬಳಿಕ ದ್ವಿಪಕ್ಷೀಯ ಮಾತುಕತೆಗೂ ಆಹ್ವಾನ ನೀಡಿದೆವು. ನಾನು ಈ ಮಾತುಕತೆಯಲ್ಲಿ ಹಾಜರಿದ್ದೆ. ಇದಾದ ಬಳಿಕ ಭಾರತದೊಂಗಿದೆ ಖ್ಯಾತ ತೆಗೆಯಲು ಬಂದಿದ್ದ ಪಾಕಿಸ್ತಾನ ಹಲವಾರು ಏರುಪೇರುಗಳನ್ನು ಕಂಡಿದೆ. 2015ರ ಡಿ.9 ರಂದು ಹಾರ್ಟ್ ಆಫ್ ಏಷ್ಯಾ ಸಮ್ಮೇಳನ ನಡೆಸಲಾಗಿತ್ತು. ಈ ವೇಳೆ ಷರೀಫ್ ಅವರು ಭಾರತದೊಂದಿಗೆ ಹೊಸ ಆಯಾಮದಲ್ಲಿ ಮಾತುಕತೆ ನಡೆಸಲಾಗುತ್ತದೆ ಎಂದಿದ್ದರು.
2015ರ ಡಿ.25 ರಂದು ನವಾಜ್ ಷರೀಫ್ ಅವರಿಗೆ ಪ್ರಧಾನಿ ಮೋದಿಯವರು ಶುಭ ಹಾರೈಕೆ ಸಲ್ಲಿಸಿದ ವೇಳೆ ಪಾಕಿಸ್ತಾನ ನಾಯಕರು ವೈಯಕ್ತಿಕವಾಗಿ ಶುಭ ಹಾರೈಸುವಂತೆ ತಿಳಿಸಿದ್ದರು. ನಂತರ ಮೋದಿಯವರು ಶಿಷ್ಟಾಚಾರವನ್ನು ಬದಿಗೊತ್ತಿ ಲಾಹೋರ್ ಗೆ ಭೇಟಿ ನೀಡಿ ಶುಭಾಶಯಗಳನ್ನು ಹೇಳಿದ್ದರು.
ಮೋದಿ ಲಾಹೋರ್ ಗೆ ಭೇಟಿ ನೀಡಿದ ಸಂದರ್ಭದ ಬಳಿಕ ಎರಡೂ ರಾಷ್ಟ್ರಗಳ ಸಂಬಂಧ ಉತ್ತಮವಾಗಿಯೇ ಇತ್ತು. ಆದರೆ, ಕಾಶ್ಮೀರದ ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಎಲ್ಲವೂ ಬದಲಾಯಿತು. ವಾನಿಯೊಬ್ಬ ಉಗ್ರನೆಂದು ತಿಳಿದಿದ್ದರೂ ಪಾಕಿಸ್ತಾನ ಆತನನ್ನು ಹುತಾತ್ಮನೆಂದು ಘೋಷಿಸಿತ್ತು. ಈ ಎಲ್ಲಾ ಬೆಳವಣಿಗೆ ಬಳಿಕ ನಮ್ಮ ಮೇಲಿನ ದಾಳಿ ಹೆಚ್ಚಾಗಿ ಹೋಯಿತು.
ಜ.1 2016ರಂದು ಪಠಾಣ್ ಕೋಟ್ ಸೇನಾನೆಲೆ ಮೇಲೆ ದಾಳಿಯಾದ ಬಳಿಕವೂ ಪಾಕಿಸ್ತಾನ ಮಾತ್ರ ತನ್ನ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. ದಾಳಿ ಬಳಿಕವೂ ಪಾಕ್ ಜೊತೆಗೆ ಮಾತುಕತೆಗೆ ಸಿದ್ಧವಾಗಿದ್ದೆವು. ಆದರೆ, ಅವರು ಉಗ್ರ ಕೃತ್ಯಗಳನ್ನು ನಿಲ್ಲಿಸಲಿಲ್ಲ. ಹೀಗಾಗಿ ಪಾಕಿಸ್ತಾನ ಉಗ್ರರಿಗೆ ನೀಡುತ್ತಿರುವ ಬೆಂಬಲವನ್ನು ನಿಯಂತ್ರಿಸುವವರೆಗೂ ಆ ರಾಷ್ಟ್ರದೊಂದಿಗೆ ಭಾರತ ಮಾತುಕತೆ ನಡೆಸುವುದಿಲ್ಲ. ಉಗ್ರವಾದ ನಿಲ್ಲಿಸಿದ ದಿನದಂದೇ ನಾವು ಮಾತುಕತೆಗೆ ಸಿದ್ಧರಾಗುತ್ತೇವೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos