ಅಮರಾವತಿ: ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಆ.10 ರಂದು ಆಂಧ್ರಪ್ರದೇಶ ಸರ್ಕಾರದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ವಿಜಯವಾಡದಲ್ಲಿರುವ ಭೂ ಆಡಳಿತದ ಮುಖ್ಯ ಆಯುಕ್ತರ ಕಚೇರಿಯಲ್ಲಿ ಹಿರಿಯ ಐಎಎಸ್ ಅಧಿಕಾರಿ ಎಂ ಜಗನ್ನಾಥಂ ಸಮ್ಮುಖದಲ್ಲಿ ಪಿವಿ ಸಿಂಧು ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದು, ಗ್ರೂಪ್-1 ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರಿಗೆ ಗ್ರೂಪ್-1 ಅಧಿಕಾರಿಯಾಗಿ ನೇಮಕ ಮಾಡಲು ಮೇ ತಿಂಗಳಲ್ಲಿ ರಾಜ್ಯ ಸಾರ್ವಜನಿಕ ಸೇವೆಗಳ ಕಾಯ್ದೆಗೆ ತಿದ್ದುಪಡಿ ತಂದು ಮಸೂದೆಯನ್ನು ಅಂಗೀಕರಿಸಲಾಗಿತ್ತು. ನಂತರ ಜುಲೈ 27 ರಂದು ಆಂಧ್ರಪ್ರದೇಶ ಸರ್ಕಾರ ಪಿವಿ ಸಿಂಧು ಅವರನ್ನು ಜಿಲ್ಲಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಸ್ವತಃ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ನೇಮಕಾತಿ ಪತ್ರವನ್ನ ಸಿಂಧು ಅವರಿಗೆ ನೀಡಿದ್ದರು. ಸಿಂಧು ಅವರು ಎಲ್ಲಾ ಅಗತ್ಯ ದಾಖಲೆಗಳನ್ನು ಒದಗಿಸಿ ಕರ್ತವ್ಯಕ್ಕೆ ಹಾಜರಾಗಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿತ್ತು.
ಇದೇ ವೇಳೆ ಮಾತನಾಡಿದ ಸಿಂಧು,ಆಂಧ್ರಪ್ರದೇಶ ಸರ್ಕಾರದ ಭಾಗವಾಗಿರೋದು ಸಂತಸದ ವಿಷಯ. ನನ್ನ ಕೆಲಸಕ್ಕೆ ಸೂಕ್ತ ನ್ಯಾಯ ಒದಗಿಸುತ್ತೇನೆ ಅಂತ ಭರವಸೆ ನೀಡಿದ್ದಾರೆ. ಕರ್ತವ್ಯದ ಜೊತೆಗೆ ಬ್ಯಾಡ್ಮಿಂಟನ್ ಆಟವನ್ನು ಮುಂದುವರೆಸುವುದಾಗಿ ಹೇಳಿ ಸಿಂಧು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos