ತಿರುವನಂತಪುರಂ: ಕಳೆದ ಫೆಬ್ರವರಿಯಲ್ಲಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಲೆಯಾಳಂ ನಟಿ ವಿರುದ್ಧ ಹೇಳಿಕೆ ನೀಡಿದ್ದ ಕೇರಳ ಶಾಸಕ ಪಿಸಿ ಜಾರ್ಜ್ ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಕೇರಳ ಮಹಿಳಾ ಆಯೋಗ ಶನಿವಾರ ಹೇಳಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯ ಮಹಿಳಾ ಆಯೋಗ, ಸಂದರ್ಶನವೊಂದರಲ್ಲಿ ನಟಿಯ ವಿರುದ್ಧ ಶಾಸಕರು ನೀಡಿರುವ ಹೇಳಿಕೆ ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಿದೆ. ಹೀಗಾಗಿ ಶಾಸಕ ಪಿಸಿ ಜಾರ್ಜ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಆಯೋಗದ ಕಾನೂನು ಅಧಿಕಾರಿ ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ.
ಕೇರಳ ವಿಧಾನಸಭೆ ಸ್ಪೀಕರ್ ಅನುಮತಿ ಪಡೆದು ಶಾಸಕರ ಹೇಳಿಕೆ ಪಡೆದುಕೊಳ್ಳುವಂತೆ ಮಹಿಳಾ ಆಯೋಗ ಅಧ್ಯಕ್ಷೆ ಎಂಸಿ ಜೋಸೆಫಿನೆ ಅವರು ನಿರ್ದೇಶಕ ವಿಯು ಕುರಿಯಕೋಸ್ ಅವರಿಗೆ ಸೂಚಿಸಿದ್ದಾರೆ.