ನವದೆಹಲಿ: ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ದೇಶ ಋಣಿಯಾಗಿದೆ. ದೇಶವಾಸಿಗಳು ಅವರಿಂದ ಪ್ರೇರಣೆ ಪಡೆದು ಮುಂದೆ ಸಾಗಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಸೋಮವಾರ ಹೇಳಿದ್ದಾರೆ.
70ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ದೇಶದ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ. ನಮ್ಮ ಸ್ವಾತಂತ್ರ್ಯಕ್ಕಾಗಿ ಹಲವರು ಪ್ರಾಣ ತ್ಯಾಗ ಮಾಡಿದ್ದಾರೆ. ಸುದೀರ್ಘ ಹೋರಾಟದ ಬಳಿಕ ಸ್ವಾತಂತ್ರ್ಯ ಸಿಕ್ಕಿದೆ. ನಾವು ಮಹಾತ್ಮ ಗಾಂಧಿ ಅವರ ಸಿದ್ಧಾಂತಗಳನ್ನು ಪಾಲಿಸಬೇಕಿದೆ ಎಂದಿದ್ದಾರೆ.
ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರ ಪಾದರ್ಶಕ ಆಡಳಿತ ನಡೆಸುತ್ತಿದೆ ಎಂದ ರಾಷ್ಟ್ರಪತಿಗಳು ಸರ್ಕಾರದ ಸ್ವಚ್ಛ ಭಾರತ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದಿದ್ದಾರೆ.
ಸರ್ಕಾರ ಕಾನೂನುಗಳನ್ನು ರೂಪಿಸಬಹುದು, ಅನುಷ್ಠಾಗೊಳಿಸಬಹುದು, ಬಲಪಡಿಸಬಹುದು. ಆದರೆ ಕಾನೂನಿಗೆ ಬದ್ಧರಾಗಿ ಬದುಕುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ಹೇಳಿದ್ದಾರೆ.
ನಮ್ಮ ದೇಶ ಈಗ ಅಭಿವೃದ್ಧಿಯತ್ತ ಸಾಗುತ್ತಿದೆ. ಹಳ್ಳಿಗಳಲ್ಲೂ ಸುಧಾರಣೆ ಕಂಡು ಬರುತ್ತಿದೆ. ನವ ಭಾರದಲ್ಲಿ ಬಡತನಕ್ಕೆ ಸ್ಥಳವೇ ಇಲ್ಲ. ನವ ಭಾರತ ನಿರ್ಮಾಣಕ್ಕೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ರಾಷ್ಟ್ರಪತಿಗಳು ಕರೆ ನೀಡಿದ್ದಾರೆ.
ಶಿಕ್ಷಣ ವ್ಯವಸ್ಥೆಯನ್ನು ಆಧುನಿಕರಣಗೊಳಿಸುವ ಅಗತ್ಯವಿದ್ದು, ಪ್ರತಿಯೊಬ್ಬರಿಗೂ ಶಿಕ್ಷಣ ತುಂಬಾ ಮುಖ್ಯ. ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆಗೆ ಇನ್ನಿತರ ಮಕ್ಕಳಿಗೂ ಶಿಕ್ಷಣ ನೀಡುವಂತೆ ದೇಶದ ಜನರಿಗೆ ಮನವಿ ಮಾಡಿದ್ದಾರೆ.
ಪ್ರಧಾನಿ ಅವರ ಕರೆಗೆ ಓಗೊಟ್ಟು ಸುಮಾರು 1 ಕೋಟಿಗಿಂತಲೂ ಹೆಚ್ಚು ಜನರು ತಮ್ಮ ಎಲ್ಪಿಜಿ ಸಬ್ಸಿಡಿ ತ್ಯಜಿಸಿದ್ದರು. ಆ ಜನರಿಗೆ ನಾನು ವಂದನೆ ಸಲ್ಲಿಸುತ್ತೇನೆ. ಅವರು ಆತ್ಮಸಾಕ್ಷಿಯ ಕರೆಗೆ ಓಗೊಟ್ಟರು. ಅಂಥಾ ಜನರಿಂದ ನಾವು ಸ್ಫೂರ್ತಿ ಪಡೆಯಬೇಕಿದೆ. ಅವರ ತ್ಯಾಗಗಳು ಬಡವರ ಜೀವನದಲ್ಲಿ ಬದಲಾವಣೆ ತರಬಹುದು ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos